ನಕಲಿ ಶ್ಯಾಮರು


Team Udayavani, Feb 16, 2020, 5:34 AM IST

rav-7

ಇತ್ತೀಚೆ ನೋಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಮಾತುಕತೆಯೊಂದರಲ್ಲಿ ತಾನು ಭಾರತದಲ್ಲೇ ಇದ್ದಿದ್ದರೆ ಈ ಪ್ರಶಸ್ತಿ ಸಿಗುತ್ತಿರಲಿಲ್ಲವೆಂಬ ಮಾತು ಹೇಳಿದರು. ಈಗ ಕಾಲೇಜುಗಳಲ್ಲಿ ಕಲಿಯುತ್ತಿರುವ ಅನೇಕ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಈ ಮಾತು ಸ್ಫೂರ್ತಿದಾಯಕ ಮಾತಾಗಿ ಕಂಡಿರಬಹುದು. ತಾವೂ ಇಲ್ಲಿ ಕಲಿತಾದ ಮೇಲೆ ವಿದೇಶಗಳ ವಿಶ್ವವಿದ್ಯಾಲಯಗಳಿಗೆ ಹೋಗಿ ಏನನ್ನಾದರೂ ಸಾಧಿಸಬೇಕೆಂಬ ಆಸೆ ಹುಟ್ಟಿರಬಹುದು. ತಪ್ಪೇನಿದೆ?

ಭಾರತದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಸಂಸ್ಥೆಗಳಲ್ಲಿ ಅತಿ ದೊಡ್ಡ ಹುದ್ದೆಯಲ್ಲಿದ್ದಾರೆ. ಅವರಿಗೆ ಲಭ್ಯವಾಗಿರುವ ಸಂಬಳದ ಮೊಬಲಗು ಕೇಳಿದರೆ ಅವಾಕ್ಕಾಗುತ್ತೇವೆ. ತಮ್ಮ ಮಕ್ಕಳೂ ಅದೇ ರೀತಿ ಸಕ್ಸೆಸ್‌ಗೆ ಭಾಜನರಾಗಬೇಕೆಂಬ ಆಸೆ ಪ್ರತಿಯೊಬ್ಬ ತಂದೆತಾಯಿಯರಿಗೆ ಇರುವುದು ಸಹಜ. ಅದರಿಂದಾಗಿ ಅವರು ಮಕ್ಕಳ ಮನಸ್ಸಿನಲ್ಲಿ ಒತ್ತಡ ತರುತ್ತಿ¨ªಾರೆ ಎಂದು ಕೇಳುತ್ತಿದ್ದೇವೆ. ಈ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಅನೇಕ ಅಧ್ಯಯನಗಳು ದೇಶದಾದ್ಯಂತ ಆಗುತ್ತಿವೆ. ಬುದ್ಧಿವಂತ ಮಹತ್ವಾಕಾಂಕ್ಷಿ ಮಕ್ಕಳಿಗೆ ಒಳ್ಳೆಯದಾಗಲಿ, ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡಿ ದೇಶಕ್ಕೆ ಒಳ್ಳೆಯ ಹೆಸರು ತರಲಿ ಎಂದು ಹಾರೈಸೋಣ.

ಎಲ್ಲ ಮಕ್ಕಳೂ ಒಂದೇ ಥರದಲ್ಲಿ ಇರುವುದಿಲ್ಲ. ಎಲ್ಲರೂ ಮೊದಲ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷಿಸುವುದು ಕೂಡ ಅಸಂಬದ್ಧ. ಆದರೆ, ಅವರ ಮನಸ್ಸನ್ನು ಹಿರಿಯರಾದ ನಾವೇ ಅರಿತುಕೊಂಡು ಅವರನ್ನು ಬುದ್ಧಿವಂತರನ್ನಾಗಿ ಮಾಡುವುದಕ್ಕೆ ಯಾವ ಹೆಜ್ಜೆಗಳನ್ನು ಹಾಕುತ್ತೇವೆ? ಯಾವುದನ್ನು ಅಭ್ಯಾಸ ಮಾಡಿದರೆ ಅವರು ಉತ್ತಮರಾಗುತ್ತಾರೆ ಎಂದು ಯೋಚಿಸುತ್ತಿದ್ದೇವೆ?

ಕೆಲವು ಶಾಲೆಗಳಲ್ಲಿ ಅವುಗಳ ವಾರ್ಷಿಕೋತ್ಸವಗಳಲ್ಲಿ ಭಾಗಿಯಾಗುವ ಅವಕಾಶ ನನಗೆ ದೊರಕಿತ್ತು. ಅತಿಥಿಯೂ ತಮ್ಮ ಮಕ್ಕಳ ಪ್ರತಿಭೆ ನೋಡಲಿ ಎಂದು ಒಂದೆರಡು ಶಾಲೆಗಳ ಮನೋರಂಜನಾ ಕಾರ್ಯಕ್ರಮಗಳನ್ನು ಮೊದಲೇ ನಿಯೋಜಿಸಿದ್ದರು. ಆ ಮಕ್ಕಳು ರೆಕಾರ್ಡರಿನ ಹಾಡುಗಳನ್ನು ಮೈಕ್‌ ಎದುರಿಟ್ಟು ಹಾಕಿ ಅದರ ಹಿನ್ನೆಲೆಯಲ್ಲಿ ನರ್ತಿಸಿದರು. ಆ ಶಾಲೆ ಇಂಗ್ಲಿಷ್‌ ಮಾಧ್ಯಮದ ಶಾಲೆ. ಆದುದರಿಂದ ಹಿಂದಿ ಚಿತ್ರಗೀತೆ ಹಾಕಿ ಅದರ ನಟನಟಿಯರ ಹೆಜ್ಜೆಗಳು, ವೈಯಾರಗಳನ್ನು ಅನುಕರಿಸಿ ನರ್ತಿಸಿದರು. ಕನ್ನಡ ಮಾಧ್ಯಮದ ಶಾಲಾಕಾಲೇಜುಗಳಿಗೆ ಹೋದಾಗ ಕನ್ನಡ ಸಿನೆಮಾ ಗೀತೆಗಳಿಗೆ ನರ್ತಿಸಿದರು. ನನಗೆ ಆಶ್ಚರ್ಯವಾದುದೆಂದರೆ ಅದನ್ನು ಸಂಯೋಜಿಸಿದ್ದು ಆ ಶಾಲೆಯ ಅಧ್ಯಾಪಕಿಯರೇ. ಅಷ್ಟೇ ಅಲ್ಲ, ಆ ಮಕ್ಕಳ ತಂದೆ ತಾಯಿಯರೂ ಸಭೆಯಲ್ಲಿ ಉಪಸ್ಥಿತರಿದ್ದರು. ಅವರ ನರ್ತನಗಳನ್ನು ಅತಿಥಿ ಮೆಚ್ಚಬಹುದೆಂದು ಅವರು ನಿರೀಕ್ಷಿಸುತ್ತಿದ್ದರು.

ಆ ನೃತ್ಯಗಳನ್ನೇನೋ ಬಹಳ ಅಚ್ಚುಕಟ್ಟಾಗಿ ಸಂಯೋಜಿಸಿದ್ದರು. ಆ ಗೀತೆಗಳೂ ಕೂಡ ಬಹಳ ಜನಪ್ರಿಯ. ಅದಕ್ಕಾಗಿ ಅವರು ಬಹಳ ದಿನಗಳ ಕಾಲ ತಾಲೀಮು ನಡೆಸಿದ್ದರೆನ್ನುವುದು ಎದ್ದು ಕಾಣುತ್ತಿತ್ತು. ಆ ಗೀತೆಯ ಅರ್ಥ ಆ ಮಕ್ಕಳಿಗೆ ತಿಳಿದಿತ್ತೋ ಇಲ್ಲವೊ? ಆದರೆ, ಅದು ಅನುಕರಣೆಯಲ್ಲವೆ? ನಾವು ನಮ್ಮ ಮಕ್ಕಳಿಗೆ ಉಳಿದವರು ಮಾಡಿದುದನ್ನು ಅನುಕರಣೆ ಮಾಡಲು ಹೇಳುತ್ತಿಲ್ಲವೆ? ಆ ಮಕ್ಕಳಿಗೆ ನಕಲು ಮಾಡುವುದನ್ನು ಅಭ್ಯಾಸ ಮಾಡಿಸುತ್ತಿದ್ದೇವೆಯೆ?

ಇದು ಈಗ ಹುಟ್ಟಿದ ಪರಂಪರೆಯಲ್ಲ. ಸುಮಾರು ಹತ್ತು-ಹದಿನೈದು ವರ್ಷಗಳ ಹಿಂದೆ ನನ್ನ ಗೆಳೆಯರೊಬ್ಬರ ಮನೆಗೆ ಹೋಗಿದ್ದಾಗ ಅವರ ಆರು ವರ್ಷಗಳ ಹೆಣ್ಣು ಮಗು ಡ್ಯಾನ್ಸ್‌ ಮಾಡುತ್ತದೆಯೆಂದು, ನನಗಿಷ್ಟವಿಲ್ಲದಿದ್ದರೂ ರಂಗೀಲಾ ಹಿಂದೀ ಸಿನೆಮಾದ ಯಾಯಿರೇ ಯಾಯಿರೇ ಹಾಡು ಹಾಕಿ ಡ್ಯಾನ್ಸ್‌ ಮಾಡಿಸಿದರು. ಶಾಲೆ-ಕಾಲೇಜುಗಳಲ್ಲಿ ದೇವದಾಸ್‌ ಚಿತ್ರದ ಡೋಲಾರೇ ಡೋಲಾರೇ, 3 ಈಡಿಯಟ್ಸ್‌ ಚಿತ್ರದ ಡೂಬಿ ಡೂಬಿ ಹಾಡುಗಳನ್ನು ಹಾಕಿ ಅಪ್ರಬುದ್ಧ ಮಕ್ಕಳಿಂದ ಡ್ಯಾನ್ಸ್‌ ಮಾಡಿಸುವುದನ್ನು ನೋಡಿದ್ದೇನೆ. ಒಂದು ಹೆಣ್ಣುಮಕ್ಕಳ ಕಾಲೇಜಿನಲ್ಲಿ ಒಂದು ಹುಡುಗಿಗೆ ಹುಡುಗನ ವೇಷ ಹಾಕಿ ಬೇಟಾ ಚಿತ್ರದ ಧಕ್‌ ಧಕ್‌ ಕರನೇ ಲಗಾ ಹಾಡಿಗೆ ನೃತ್ಯ ಮಾಡಿಸಿದ್ದನ್ನೂ ಕಂಡಿದ್ದೇನೆ. ಹುಡುಗರು ಕನ್ನಡ ಸಿನೆಮಾಗಳ ಹಾಡುಗಳಿಗೆ ಪಾಶ್ಚಾತ್ಯ ನೃತ್ಯಗಳ ರೀತಿಯಲ್ಲಿ ಹೆಜ್ಜೆ ಹಾಕುವುದನ್ನು ಕೂಡ ನೋಡಿದ್ದೇನೆ. ದುರ್ದೈವವೆಂದರೆ ಅಧ್ಯಾಪಿಕೆಯರೇ ಇವಕ್ಕೆ ಕುಮ್ಮಕ್ಕು ಕೊಡುವುದೂ ತಂದೆತಾಯಿಯರು ಹೆಮ್ಮೆ ಪಡುವುದೂ ಕಾಣುತ್ತದೆ.

ಖಂಡಿತವಾಗಿ ಸಿನೆಮಾಗಳಲ್ಲಿ ಈ ಥರದ ಹಾಡುಗಳಿಗೆ ಮಾಡಿದ ನೃತ್ಯಗಳು ಬಹಳ ಚೆನ್ನಾಗಿವೆ. ಆದರೆ, ಹೆಚ್ಚಿನ ನಟನಟಿಯರು ಯಾರನ್ನೂ ನಕಲು ಮಾಡಿದವರಲ್ಲ. ಶಾಸ್ತ್ರೀಯ ನೃತ್ಯವನ್ನು ಬಹಳ ವರ್ಷಗಳ ಕಾಲ ಅಭ್ಯಾಸ ಮಾಡಿದವರು. ಉದಾಹರಣೆಗೆ ಹಿಂದಿಯ ಧಕ್‌ ಧಕ್‌ ನಟಿ ಮಾಧುರಿ ದೀಕ್ಷಿತ್‌ ಒಬ್ಬ ಅತ್ಯುತ್ತಮ ಕಲಾವಿದೆ. ಒಳ್ಳೆಯ ನೃತ್ಯಗಾತಿ. ಸಿನೆಮಾಕ್ಕಾಗಿ ಅವರು ಎಂತೆಂಥದೋ ನೃತ್ಯಗಳನ್ನು ಮಾಡಿರಬಹುದು. ಆದರೆ, ಶಾಸ್ತ್ರೀಯ ನೃತ್ಯವನ್ನು ಗುರುಗಳಿಂದ ಕಲಿತವರು. ಅವರು ಬಿರ್ಜು ಮಹಾರಾಜರಂಥ ಶ್ರೇಷ್ಠ ಕಲಾವಿದರ ಜೊತೆ ಮಾಡಿರುವ ನೃತ್ಯಗಳು ಇದಕ್ಕೆ ಸಾಕ್ಷಿ. ಅವರು ಪ್ರಬುದ್ಧೆಯೂ ಹೌದು, ತಾನೇನು ಮಾಡುತ್ತಿದ್ದೇನೆಂಬ ಸಂಪೂರ್ಣ ಪರಿಜ್ಞಾನ ಉಳ್ಳವರು. ಅವರಿಗೆ ತಾವು ನರ್ತಿಸುವ ಹಾಡಿನ ಸಾಹಿತ್ಯದ ಅರ್ಥವೂ ಗೊತ್ತು.

ನಾನೊಮ್ಮೆ ಹೈದರಾಬಾದ್‌ಗೆ ಹೋಗಿದ್ದಾಗ ನನ್ನ ಗೆಳೆಯನೊಬ್ಬನ ಜೊತೆಯಲ್ಲಿ , ನನಗೆ ಆಮಂತ್ರಣವಿಲ್ಲದಿದ್ದರೂ ಅವನನ್ನು ಕರೆದಿದ್ದುದರಿಂದ ಒಂದು ಮದುವೆಗೆ ಹೋಗಿದ್ದೆ. ಮದುವೆಗೆ ಮೊದಲೇ ಅತಿಥಿಗಳು ನೋಡಲೆಂದು ಅಲ್ಲಿ ಒಂದು ವೀಡಿಯೋ ಹಾಕಿದ್ದರು. ಅದು ಮದುವೆಯಾಗುವ ವಧೂವರರು ಡ್ಯಾನ್ಸ್‌ ಮಾಡುತ್ತಿರುವುದನ್ನು ಚಿತ್ರೀಕರಿಸಿದ ಸುಮಾರು ಐದು ನಿಮಿಷಗಳ ವೀಡಿಯೋ. ಒಂದು ಅದ್ದೂರಿ ಜನಪ್ರಿಯ ಸಿನೆಮಾದ ಹಾಡನ್ನು ಆ ವಿಡಿಯೋದಲ್ಲಿ ಅಳವಡಿಸಿಕೊಂಡಿದ್ದರು. ಮದುವೆಯಾಗುವ ಮೊದಲು, ವಧೂವರರು ಸಿನೆಮಾದವರು ಚಿತ್ರೀಕರಿಸಿದ ಲೊಕೇಶನ್‌ಗೆ ಹೋಗಿ, ಸಿನೆಮಾದ ರೀತಿಯಲ್ಲೇ ನಾಲ್ಕಾರು ಬಗೆಯ ಉಡುಪುಗಳನ್ನು ಧರಿಸಿ, ಸಿನೆಮಾದಲ್ಲಿ ತೋರಿಸಿದ ಹಾಗೆಯೇ ಆ್ಯಕ್ಷನ್‌ ಮಾಡುತ್ತ ಸಿನೆಮಾದ ಸಹಾಯಕ ನಿರ್ದೇಶಕನ ಮೂಲಕ ಡೈರೆಕ್ಟ್ ಮಾಡಿಸಿ ಚಿತ್ರೀಕರಿಸಿದ್ದೆಂದು ನನ್ನ ಗೆಳೆಯ ಹೇಳಿದ. ಅದು ಸಿನೆಮಾದ ಕ್ಲಿಪ್ಪಿಂಗ್‌ನಂತೆಯೇ ಕಾಣುತ್ತಿತ್ತು. ಸಿನೆಮಾಗಳು ನಮ್ಮನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿವೆ ಹಾಗೂ ತೆಲುಗು ಸಿನೆಮಾಗಳ ಅದ್ದೂರಿತನವೆಂದ ಮೇಲೆ ಕೇಳಬೇಕೆ?

ಇತ್ತೀಚೆಗೆ ಇನ್ನೊಂದು ವಿಡಿಯೋದಲ್ಲಿ ಓರ್ವ ಹೆಣ್ಣುಮಗಳು ವಧುವಾಗಿ ಸಿಂಗಾರ ಮಾಡಿಕೊಂಡು ಮದುವೆಯ ಮಂಟಪಕ್ಕೆ ಯಾವುದೋ ಸಿನೆಮಾ ಹಾಡಿಗೆ ನೃತ್ಯ ಮಾಡುತ್ತ ಪ್ರವೇಶ ಕೊಟ್ಟುದು ವಾಟ್ಸಾಪ್‌ನಲ್ಲಿ ವೈರಲ್‌ ಆಯಿತು.

ಈ ವಧುವಾಗಲಿ, ಹೈದರಾಬಾದಿನ ವಧೂವರರಾಗಲಿ ಚಿಕ್ಕಂದಿನಲ್ಲಿ ಶಾಲೆಗೆ ಹೋಗುತ್ತಿರುವಾಗ ಕಲಿಸಿದ ನಾಟ್ಯಗಳ ಪಾಠ ಹೀಗೆ ಉಪಯೋಗವಾಯಿತು. ಅಂದರೆ ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ನಮ್ಮ ಅಭ್ಯಾಸ ಹೀಗೆ ಮುಂದುವರಿಯಿತು. ಆದರೆ, ಇದು ಒಳ್ಳೆಯ ಒಂದು ಪರಂಪರೆಯಾಗುತ್ತಿದೆಯೇ?

ಸಣ್ಣ ಸಣ್ಣ ಮಕ್ಕಳಿಂದ ಇಂಥ ನೃತ್ಯಗಳನ್ನು ಮಾಡಿಸುವ ಅಧ್ಯಾಪಿಕೆಯರು, ಹೆಮ್ಮೆಪಡುವ ತಂದೆತಾಯಂದಿರು ಮಾಡಿಸುತ್ತಿರುವುದು ಏನನ್ನು? ಬರಿಯ ಕಾಪಿ ಮಾಡುವುದಲ್ಲವೆ? ಆ ಮಕ್ಕಳಿಗೆ ನೃತ್ಯದಲ್ಲಿ ಅಷ್ಟು ಆಸಕ್ತಿ ಇದೆ ಎಂದು ತಂದೆತಾಯಿಯರಿಗೆ ಅನಿಸಿದಲ್ಲಿ, ಒಳ್ಳೆಯ ಒಂದು ನೃತ್ಯಶಾಲೆಯಲ್ಲಿ ಶಾಸ್ತ್ರೀಯವಾಗಿ ಡ್ಯಾನ್ಸ್‌ ಕಲಿಸಬಹುದಲ್ಲ? ಈಗ ಭಾರತೀಯ ನೃತ್ಯಶಾಲೆಗಳಲ್ಲದೇ ಪಾಶ್ಚಾತ್ಯ ನೃತ್ಯವನ್ನು ಕಲಿಸುವ ಖಾಸಗಿ ಶಾಲೆಗಳೂ ಇದ್ದಾವೆ. ತಂದೆತಾಯಿಯರು ಆಯ್ಕೆ ಮಾಡಿ ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ಕೊಡಬಹುದಲ್ಲ? ಈ ಕಾಪಿ ಮಾಡುವ ಅಭ್ಯಾಸವನ್ನು ಮುಗ್ಧ ಮಕ್ಕಳಿಗೆ ಯಾಕೆ ಕಲಿಸಬೇಕು? ಇಂಥವುಗಳನ್ನು ಕಲಿಸಿ ತಾತ್ಕಾಲಿಕ ಆನಂದ ಪಡೆಯಬಹುದಲ್ಲದೆ ಬೇರೇನನ್ನು ಸಾಧಿಸಲು ಸಾಧ್ಯ?

ಕೃಷ್ಣಾ ನೀ ಬೇಗನೆ ಬಾರೋ…
ನಿಜ, ಶಾಸ್ತ್ರೀಯ ನಾಟ್ಯವೂ ಹಿಂದೆ ಯಾರೋ ಮಾಡಿರುವುದೇ. ಅವೇ ಹಾಡುಗಳು, ಅವೇ ಕುಣಿತದ ರೀತಿ. ಕೃಷ್ಣಾ ನೀ ಬೇಗನೆ ಬಾರೋ, ಪಿಳ್ಳಂಗೋವಿಯ ಚೆಲುವ ಕೃಷ್ಣನಾ ಇತ್ಯಾದಿ ಕಲಿತರೆ ಕಾಪಿಯಾಗುವುದಿಲ್ಲವೆ- ಎಂಬ ಪ್ರಶ್ನೆ ಏಳಬಹುದು. ನಾನೊಮ್ಮೆ ಬೆಂಗಳೂರಿನ ಓರ್ವ ಪ್ರಖ್ಯಾತ ಭರತನಾಟ್ಯ ಕಲಾವಿದೆಯ ಮನೆಗೆ ಹೋಗಿದ್ದೆ. ತಮ್ಮ ಜೀವನವನ್ನೇ ನೃತ್ಯಕ್ಕಾಗಿ ಮುಡಿಪಾಗಿಟ್ಟ ಕಲಾವಿದೆಯವರು. ಅವರ ಮನೆಗೆ ಊಟಕ್ಕೆ ಬರಹೇಳಿದ್ದರು. ನಾವು ಹೆಚ್ಚೆಂದರೆ ಐದಾರು ಜನರಿರಬಹುದು. ಒಂದಿಬ್ಬರ ಮನೆಯವರೂ ಇದ್ದ ಖಾಸಗಿ ಭೇಟಿಯದು. ಊಟವಾದ ಮೇಲೆ ಯಾವುದೇ ನೃತ್ಯದ ಉಡುಪು ಹಾಕಿಕೊಳ್ಳದೆ ಟೇಪ್‌ ರೆಕಾರ್ಡರ್‌ ಹಾಡು ಹಾಕಿ ಅವರು ಕೆಲವು ಸಣ್ಣ ಸಣ್ಣ ಪಟ್ಟುಗಳನ್ನು ತೋರಿಸಿದರು. ಕೃಷ್ಣಾ ನೀ ಬೇಗನೆ ಬಾರೋ ಎನ್ನುವ ಕೀರ್ತನೆಯ ಮೊದಲ ಪದ್ಯವನ್ನು ನಾಲ್ಕಾರು ಭಂಗಿಗಳಲ್ಲಿ ನರ್ತಿಸಿ ತೋರಿಸಿದರು. ಒಬ್ಬೊಬ್ಬ ಕಲಾವಿದನೂ ಅವರವರ ಭಾವಕ್ಕೆ ತಮ್ಮ ಕಲೆಯನ್ನು ಹೇಗೆ ಪ್ರದರ್ಶಿಸುತ್ತಾರೆ ಎನ್ನುವುದಕ್ಕೆ ಅವರು ಅಂದು ಕೊಟ್ಟ ವೈವಿಧ್ಯ ಬೆರಗುಗೊಳಿಸುವಂತಿತ್ತು.

ಶಾಲಾಕಾಲೇಜುಗಳಲ್ಲಿ ಸಿನೆಮಾ ಹಾಡುಗಳಿಗೆ ನರ್ತಿಸುವಾಗ ಯಾವ ಹಾಡು ಹಾಕಿದರು, ಹೇಗೆ ದೇಹವನ್ನು ಕುಣಿಸಿದರು ಅನ್ನುವ ಬಗ್ಗೆ ಆಕ್ಷೇಪವಿಲ್ಲ. ಎಲ್ಲರೂ ಈ ರೀತಿ ಮಾಡಲು ಬಯಸುತ್ತಾರೆನ್ನುವುದೂ ಅಲ್ಲ. ಆದರೆ, ಶಾಲೆಯ ತಮ್ಮದೇ ತರಗತಿಯ ಹತ್ತಿಪ್ಪತ್ತು ಸಹಪಾಠಿಗಳು ವೇದಿಕೆಗಳಿಗೆ ಹೋಗಿ ಡ್ಯಾನ್ಸ್‌ ಮಾಡುವುದನ್ನು ನೋಡುವ ವಿದ್ಯಾರ್ಥಿಗಳು ಕೂಡ ಅದೇ ಪ್ರತಿಭೆ ಎಂಬ ಮನಃಸ್ಥಿತಿಯನ್ನು ಮುಗ್ಧ ಮನಸ್ಸುಗಳಲ್ಲಿ ಕೆತ್ತಿಸಿಕೊಂಡರೆ? ಆದುದರಿಂದ ಕಾಪಿ ಮಾಡುವ ಅಭ್ಯಾಸವನ್ನು ಅವರಿಗೆ ಕಲಿಸುವುದು ಎನ್ನುವುದು ಸಮಸ್ಯೆ. ಒಂದು ಹಾಡನ್ನು ಆರಿಸಿ, ತಮ್ಮದೇ ಶೈಲಿಯಲ್ಲಿ ಅದರ ಕೊರಿಯೋಗ್ರಫಿಯನ್ನು ಸಂಯೋಜಿಸಿ ಪ್ರದರ್ಶಿಸಿದರೆ ಅದು ಬೇರೆ ವಿಚಾರ. ಅದು ಅವರ ಸೃಜನಶೀಲತೆಯನ್ನು ಬೆಳೆಸಿದಂತಾಗುತ್ತದೆ. ಮುಂದೆ ಅದು ಅವರ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ಬೆಳಗಿಸಬಹುದು. ಅದನ್ನು ಬಿಟ್ಟು ಸಿನೆಮಾದ ರೀತಿಯನ್ನು ಅನುಕರಿಸಿದರೆ ಏನಾಗಬಹುದು? ಬೇರೆಯವರು ಮಾಡಿದ್ದನ್ನೇ ಮಾಡುವ, ಅನುಕರಿಸುವ, ಯಾವುದೇ ಸೃಜನಶೀಲತೆಯಿಲ್ಲದ ಬದುಕು ಕೊಟ್ಟಂತಾಗಬಹುದು. ಹಾಗೆ ಆದವರಿಗೆ “ನಕಲಿಶ್ಯಾಮರು’ ಎನ್ನುತ್ತಾರೆ. ಅಂತಹ ಪೀಳಿಗೆಯನ್ನು ನಾವು ಬೆಳೆಯಿಸುತ್ತಿದ್ದೇವೆಯೆ?

ಗೋಪಾಲಕೃಷ್ಣ ಪೈ

ಟಾಪ್ ನ್ಯೂಸ್

1-puna

Pune ಪೋರ್ಶೆ ಕಾರು ಅಪಘಾತ ಕೇಸು: ಇಬ್ಬರು ವೈದ್ಯರ ಸೆರೆ

ತಿಂಗಳಿಗೊಮ್ಮೆ ಸಿಎಂ , ಡಿಸಿಎಂ ಕಾರ್ಯಕರ್ತರ ಭೇಟಿ: ಡಿ.ಕೆ.ಶಿವಕುಮಾರ್‌

ತಿಂಗಳಿಗೊಮ್ಮೆ ಸಿಎಂ , ಡಿಸಿಎಂ ಕಾರ್ಯಕರ್ತರ ಭೇಟಿ: ಡಿ.ಕೆ.ಶಿವಕುಮಾರ್‌

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

17

Baratang‌ Island: ಬಾರಾತಂಗ್‌ ಎಂಬ ಬೆರಗು

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

11

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-puna

Pune ಪೋರ್ಶೆ ಕಾರು ಅಪಘಾತ ಕೇಸು: ಇಬ್ಬರು ವೈದ್ಯರ ಸೆರೆ

ತಿಂಗಳಿಗೊಮ್ಮೆ ಸಿಎಂ , ಡಿಸಿಎಂ ಕಾರ್ಯಕರ್ತರ ಭೇಟಿ: ಡಿ.ಕೆ.ಶಿವಕುಮಾರ್‌

ತಿಂಗಳಿಗೊಮ್ಮೆ ಸಿಎಂ , ಡಿಸಿಎಂ ಕಾರ್ಯಕರ್ತರ ಭೇಟಿ: ಡಿ.ಕೆ.ಶಿವಕುಮಾರ್‌

1-asasas

Kejriwal ಅವಕಾಶವಾದಿ, ಮಣಿಶಂಕರ್‌ ಅಯ್ಯರ್‌ ಬಾಯಿಬಡುಕ: ವಾದ್ರಾ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

Supreme Court

BJP ಅರ್ಜಿ ತಿರಸ್ಕರಿಸಿದ ಸುಪ್ರೀಂ; ಪ್ರತಿಸ್ಪರ್ಧಿ ಎಂದರೆ ವೈರಿ ಅಲ್ಲ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.