ನಾಗರಹೊಳೆ ಉದ್ಯಾನದಲ್ಲಿ ಕಾಡ್ಗಿಚ್ಚು
Team Udayavani, Feb 5, 2018, 6:15 AM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಿಡಿಗೇಡಿಗಳು ಹಾಕಿದ್ದ ಬೆಂಕಿಗೆ ಸುಮಾರು 20 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗಾಹುತಿಯಾಗಿದ್ದು, ಸಕಾಲದಲ್ಲಿ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರು- ವಿರಾಜಪೇಟೆ-ಕಣ್ಣಾನೂರು ಹೆದ್ದಾರಿ ಬದಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಗೇಟ್ ಬಳಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಕೊಟ್ಟಿದ್ದು, ಹುಣಸೂರು-ಆನೆಚೌಕೂರು ವಲಯ ಹಾಗೂ ಆನೆಚೌಕೂರು ಪ್ರಾದೇಶಿಕ ಅರಣ್ಯದ ಕೆಲ ಭಾಗಕ್ಕೂ ಸಹ ಬೆಂಕಿ ಹರಡಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್, ಎ.ಸಿ.ಎಫ್.ಪ್ರಸನ್ನಕುಮಾರ್, ಆರ್.ಎಫ್.ಓ.ಗಳಾದ ಕಿರಣ್ಕುಮಾರ್, ಸುರೇಂದ್ರ ಅವರು ಸಿಬ್ಬಂದಿ ಜತೆ ಆಗಮಿಸಿ ಬೆಂಕಿ ನಂದಿಸಿದರು.
ಮೂರು ವರ್ಷದ ಹಿಂದೆಯೂ ಆನೆಚೌಕೂರು ವಲಯದ ಕಂಠಾಪುರ ಆನೆ ಶಿಬಿರದ ಅಕ್ಕಪಕ್ಕದಲ್ಲಿ ಕಿಡಿಗೇಡಿಗಳು ಬೆಂಕಿ
ಹಚ್ಚಿದ್ದರು. ಆಗ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು. ಕಳೆದ ವರ್ಷ ಬಂಡೀಪುರ ಉದ್ಯಾನದಲ್ಲಿ ಬೆಂಕಿ ನಂದಿಸುವ ವೇಳೆ ಅರಣ್ಯ ರಕ್ಷಕರೊಬ್ಬರು ಬೆಂಕಿಗೆ ಆಹುತಿಯಾಗಿದ್ದರು.