ಶಿಕ್ಷಣ, ಅನ್ನದಾಸೋಹವೇ ಕಾಯಕ
Team Udayavani, Jan 22, 2019, 12:50 AM IST
ತುಮಕೂರು: ಅನ್ನ, ಅಕ್ಷರ, ಆಶ್ರಯ ನೀಡುವ ತ್ರಿವಿಧ ದಾಸೋಹದ ಕ್ಷೇತ್ರ ಶ್ರೀ ಸಿದ್ಧಗಂಗಾ ಮಠದಲ್ಲಿ ಶಾಲಾ ಪ್ರವೇಶ ಕಾರ್ಯ ಆರಂಭವಾದರೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಲು ಎಲ್ಲಾ ಜಾತಿ, ಧರ್ಮ ಹಾಗೂ ಎಲ್ಲಾ ವರ್ಗದ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಶ್ರೀ ಮಠದಲ್ಲಿ ವಿದ್ಯಾಭ್ಯಾಸಕ್ಕೆ ಬರುವ ಮಕ್ಕಳ ಜಾತ್ರೆಯೇ ನಡೆಯುತ್ತದೆ.
ಸದಾ ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಸೇರಿ ರಾಜ್ಯದ ಎಲ್ಲಾ ಭಾಗಗಳಿಂದ ಮಕ್ಕಳು ತಮ್ಮ ಪೋಷಕರೊಂದಿಗೆ ಶಾಲೆ ಆರಂಭವಾಗುತ್ತಲೇ ಶ್ರೀ ಮಠಕ್ಕೆ ಬರುತ್ತಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಸ್ವತಃ ಎಲ್ಲಾ ಮಕ್ಕಳ ಸಂದರ್ಶನ ನಡೆಸಿ ಮಠದಲ್ಲಿ ಕಲಿಯಲು ಅವಕಾಶ ಕಲ್ಪಿಸುತ್ತಿದ್ದ ಪರಿ ಇನ್ನು ನೆನಪು ಮಾತ್ರ.
ಯಾವುದೇ ವಂತಿಗೆ, ಶುಲ್ಕವಿಲ್ಲದೇ ಉಚಿತ ವಸತಿ ಸಹಿತ ಮಕ್ಕಳಿಗೆ ಅವಕಾಶ ಕಲ್ಪಿಸಿ ಶಿಕ್ಷಣ ನೀಡುವುದು ಶ್ರೀಗಳ ಕಾಯಕ. ಪರಿಣಾಮ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕೋರಿ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಸಿದ್ಧಗಂಗಾ ಕ್ಷೇತ್ರದಲ್ಲಿ ಏಪ್ರಿಲ್ ತಿಂಗಳಲ್ಲಿ ಡಾ.ಶ್ರೀ ಶಿವಕುಮಾರಸ್ವಾಮಿಗಳ ಜನ್ಮ ದಿನದ ಉತ್ಸವವಾದರೆ ಮಹಾ ಶಿವರಾತ್ರಿ ಸಮಯದಲ್ಲಿ ಶ್ರೀ ಕ್ಷೇತ್ರನಾಥ ಸಿದ್ಧಲಿಂಗೇಶ್ವರ ಸ್ವಾಮಿ ಮಹಾ ರಥೋತ್ಸವ ನಡೆಯುತ್ತದೆ. ಜೂನ್ನಲ್ಲಿ ಜ್ಞಾನ ದಾಸೋಹ ಪಡೆಯಲು ನಾಡಿನ ವಿವಿಧ ಭಾಗಗಳಿಂದ ಬರುವ ಪೋಷಕರ ಮಕ್ಕಳ ಜಾತ್ರೆ ನಡೆಯುತ್ತದೆ.
ಅನ್ನದಾಸೋಹ: ಶ್ರೀ ಕ್ಷೇತ್ರದಲ್ಲಿ ಅಟವೀ ಶಿವಯೋಗಿಗಳು ಭಕ್ತಿಯಿಂದ ಹಚ್ಚಿದ ಒಲೆ ಆರದೆ ಹಸಿದ ಹೊಟ್ಟೆಗೆ ನಿರಂತವಾಗಿ ಅನ್ನ ನೀಡುವಂತಹ ಮಹಾಕಾರ್ಯ ಈಗಲೂ ಸಾಗುತ್ತಿದೆ. ಆ ಸಮಯದಲ್ಲಿಯೇ ಅನ್ನದಾಸೋಹದ ಜತೆ ವಿದ್ಯಾದಾನ ಮಾಡಬೇಕೆಂದು ಸಂಕಲ್ಪ ತೊಟ್ಟು ವಿದ್ಯಾರ್ಥಿ ನಿಲಯ ಸಹ ಆರಂಭಿಸಲಾಯಿತು. ಈ ದೇಶ ಅಭಿವೃದ್ಧಿ ಹೊಂದಬೇಕಾದರೆ ಎಲ್ಲರಿಗೂ ಶಿಕ್ಷಣ ದೊರಕಬೇಕು ಎಂದು ಭಾವಿಸಿದ ಶ್ರೀಗಳು ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹಕ್ಕೂ ಒತ್ತು ನೀಡಿದ್ದರು.
10 ಸಾವಿರ ಮಕ್ಕಳು: ಶ್ರೀಕ್ಷೇತ್ರದಲ್ಲಿ 1917ರಲ್ಲಿ ಶ್ರೀಗುರು ಉದ್ಧಾನ ಶಿವಯೋಗಿ ಸ್ವಾಮಿಗಳು ಜಾತಿ,ಮತ ಬೇಧವಿಲ್ಲದೆ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಮಕ್ಕಳ ವಿದ್ಯೆಗೆ ಚಾಲನೆ ನೀಡಿದರು. ಇದನ್ನು ಪ್ರಾರಂಭಿಸಿದಾಗ ಕೇವಲ 53 ವಿದ್ಯಾರ್ಥಿಗಳಿದ್ದರು. ಈಗ 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನ ಆಶ್ರಯ ಜ್ಞಾನ ನೀಡಲಾಗುತ್ತಿದೆ. ಮಠದ ಆವರಣದಲ್ಲಿ ನಾಡಿನ ವಿವಿಧ ಭಾಗಗಳಿಂದ ಬರುವ ಅಸಂಖ್ಯಾತ ಭಕ್ತರನ್ನು ಸ್ವಾಮೀಜಿಗಳೇ ಪೋಷಕರನ್ನು ಮಾತನಾಡಿಸಿ ಮಗುವನ್ನು ಮಠದಲ್ಲಿ ವಿದ್ಯಾಭ್ಯಾಸಕ್ಕೆ ತೆಗೆದುಕೊಳ್ಳುತ್ತಿದ್ದ ಪರಿ ಅನನ್ಯವಾಗಿತ್ತು.
ಪ್ರತಿದಿನ ಬೆಳಿಗ್ಗೆ ಶಿವಪೂಜೆ, ಪ್ರಾರ್ಥನೆ ನಂತರ 7 ಗಂಟೆಗೆ ಸ್ವಾಮೀಜಿ ಮಠದ ಕಚೇರಿಗೆ ಬಂದು ನೂತನವಾಗಿ ಸೇರ ಬಯಸುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಸ್ವತಃ ತಾವೇ ಪರಿಶೀಲಿಸಿ ಅನುಮತಿ ನೀಡುತ್ತಿದ್ದರು.
ಶ್ರೀಗಳು ಆರಂಭಿಸಿದ ಶಿಕ್ಷಣ ಸಂಸ್ಥೆಗಳ ಸಂಖ್ಯೆ 125
ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎನ್ನುವ ಕಾರಣಕ್ಕಾಗಿಯೇ ರಾಜ್ಯದ ವಿವಿಧ ಕಡೆಗಳಲ್ಲಿ ಸಿದ್ಧಗಂಗಾ ಶಿಕ್ಷಣ ಸಂಸೆœ ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿ ದ್ದಾರೆ. ಶ್ರೀಗಳು 125 ಶಿಕ್ಷಣ ಸಂಸೆœ ತೆರೆದಿದ್ದಾರೆ. ಅದರಲ್ಲಿ ಒಂದು ತಾಂತ್ರಿಕ ಮಹಾವಿದ್ಯಾಲಯ. 57 ಪ್ರೌಢಶಾಲೆ, 12 ಪದವಿ ಪೂರ್ವ ಕಾಲೇಜು, ಏಳು ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ 20 ಮಹಾಸಂಸ್ಕೃತ ಪಾಠಶಾಲೆಗಳು.