ಆದಾಯದೊಂದಿಗೆ ಜನಮನ್ನಣೆ ಪಡೆಯಲು ಆರ್ಕೆಸ್ಟ್ರಾ ಸೂಕ್ತ
Team Udayavani, Dec 4, 2019, 4:12 AM IST
ನಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಓದಿನೊಂದಿಗೆ ಉದ್ಯೋಗ ಪಡೆಯುವುದೆಂದರೆ ಭವಿಷ್ಯದ ಉದ್ಯೋಗಕ್ಕೆ ಮೊದಲೇ ಸಿದ್ಧತೆ ನಡೆಸಿದಂತೆ. ಅಂತಹ ಉದ್ಯೋಗಗಳಲ್ಲಿ ಹಾಡು ಹೇಳುವುದೂ ಒಂದು. ವಿದ್ಯಾರ್ಥಿಗಳಿಗೆ ಹಾಡು ಹೇಳುವ ಹವ್ಯಾಸವಿದ್ದು, ಉತ್ತಮ ಸ್ವರ ಮಾಧುರ್ಯ ಹೊಂದಿದ್ದರೆ ಆರ್ಕೆಸ್ಟ್ರಾಗಳಂತಹ ಪ್ಲಾಟ್ಫಾರ್ಮ್ಗಳಿಗೇನೂ ಕಡಿಮೆ ಇಲ್ಲ. ಹಾಡು ಹೇಳುವುದರಿಂದಲೂ ಆದಾಯ ಗಳಿಸಲು ಸಾಧ್ಯವಿದೆ.
ಆರ್ಕೆಸ್ಟ್ರಾದಲ್ಲಿ ಹಾಡುವುದ ರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಚಲಿತವಾಗುವ ಸಾಧ್ಯತೆ ಯಿದೆ. ಒಮ್ಮೆ ಈ ವೇದಿಕೆ ದೊರೆಯಿತೆಂದರೆ ರಿಯಾಲಿಟಿ ಶೋಗಳಲ್ಲಿ ಜನಮಾನ್ಯತೆ ಪಡೆ ಯುವ ಸಾಧ್ಯತೆಯಿದೆ. ಕಾರ್ಯ ಕ್ರಮವೊಂದಕ್ಕೆ 1 ಸಾವಿರ ರೂ.ಯಿಂದ 2 ಸಾವಿರ ರೂ.ವರೆಗೆ ಆದಾಯ ಗಳಿಸಬಹುದು.
ಅರ್ಹತೆಗಳು
· ಧ್ವನಿ ಮಾಧುರ್ಯ-ಸ್ವರಗಳ ಏರಿಳಿತವನ್ನು ಅರಿತಿರಬೇಕು.
· ಹಾಡನ್ನು ಕೇಳುವ ಹವ್ಯಾಸ ಮತ್ತು ಪ್ರಚಲಿತ ಹಾಡಿನ ಅನುಭವ ಹೊಂದಿದ್ದರೆ ಎಲ್ಲ ಕಾರ್ಯಕ್ರಮಗಳಿಗೂ ಬೇಡಿಕೆ ಇದ್ದೇ ಇರುತ್ತದೆ.
· ಹಾಡಿನ ಸಾಹಿತ್ಯವನ್ನು ನೆನಪಿನಲ್ಲಿಟ್ಟುಕೊಂಡು ತಪ್ಪುಗಳಿಲ್ಲದೆ ಸ್ಪಷ್ಟತೆಯೊಂದಿಗೆ ಹಾಡಬೇಕು.
· ಉತ್ತಮ ಮಾತುಗಾರಿಕೆ ಇದ್ದರೆ ಪ್ರೇಕ್ಷಕರನ್ನು ಸೆಳೆಯಲು ಸಹಕಾರಿ.
· ಹಾಡಿನ ಹಿನ್ನೆಲೆ ಅರಿತಿದ್ದರೆ ನಿಮ್ಮ ಹಾಡಿಗೆ ವಿಶೇಷ ಗೌರವ ಮನ್ನಣೆಯಾಗುತ್ತದೆ.
· ಸಂಗೀತ ಲಯಕ್ಕೆ ತಕ್ಕಂತೆ ಸಾಹಿತ್ಯ ಹಾಡುವುದನ್ನು ಕರಗತ ಮಾಡಿಕೊಂಡಿರಬೇಕು.
· ಎಲ್ಲ ಹಾಡಿಗೆ ಪೂರ್ವ ತಯಾರಿ ಮಾಡಿಕೊಂಡಿರಬೇಕು.
· ಎಲ್ಲದಕ್ಕಿಂತ ಮುಖ್ಯವಾಗಿ ವೇದಿಕೆಯ ಹಿಂಜರಿಕೆ ಇಲ್ಲದಿದ್ದರೆ ಅರ್ಧ ಯಶಸ್ಸನ್ನು ಪಡೆದಿದ್ದೀರಿ ಎಂದರ್ಥ.
ಅತಿಯಾಗದಿರಲಿ ಆತ್ಮ ವಿಶ್ವಾಸ
ಆತ್ಮ ವಿಶ್ವಾಸ ನಮ್ಮನ್ನು ಹೆಚ್ಚು ಸದೃಢವಾಗಿಸುತ್ತದೆ. ಆದರೆ ಅತೀ ಆತ್ಮವಿಶ್ವಾಸ ನಮ್ಮಲ್ಲಿ ಅಹಂಕಾರ ಗುಣಗಳು ಬೆಳೆಯುವ ಸಾಧ್ಯತೆ ಇದೆ. ಹಾಡುಗಾರರು ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮೊದಲು ಎಣ್ಣೆ ತಿಂಡಿ, ಕುರುಕಲು, ಐಸ್ಕ್ರೀಂ ಮುಂತಾದ ಆಹಾರದಿಂದ ದೂರ ಉಳಿಯಬೇಕು. ಇದರಿಂದ ಗಂಟಲು ಕಟ್ಟುವ ಸಮಸ್ಯೆಯಿಂದ ಪಾರಾಗಬಹುದು. ಕಾರ್ಯಕ್ರಮದ ಮೊದಲೇ ಧ್ವನಿವರ್ಧಕಗಳನ್ನು ಪರೀಕ್ಷಿಸಿ ನಿಮ್ಮ ಸ್ವರ ಸ್ಪಷ್ಟತೆಯನ್ನು ಪರಿಕ್ಷಿಸಿಕೊಳ್ಳಿ.
ಹೊಸತಾಗಿ ಸೇರುವವರು
ಸಾಮಾನ್ಯವಾಗಿ ಹೊಸಬರು ಸೇರುವಾಗ ವೇದಿಕೆ ಭಯವಿರುತ್ತದೆ. ಹಾಡನ್ನು ಎಲ್ಲಿ ತಪ್ಪಾಗಿ ಉಚ್ಚಾರ ಮಾಡುವೆನೋ, ಸ್ವರ ಸರಿ ಇದೆಯೋ ಇಲ್ಲವೋ ಎಂಬ ಯೋಚನೆಗಳೇ ನಿಮ್ಮನ್ನು ಅರ್ಧಭಾಗದಷ್ಟು ಕುಗ್ಗಿಸುತ್ತವೆ. ಇನ್ನೂ ಕೆಲವರು ನಮಗೆಲ್ಲ ತಿಳಿದಿದೆ ಎಂಬ ಅಹಂಕಾರದಿಂದ ವರ್ತಿಸುತ್ತಾರೆ. ಈ ಗುಣ ಸದಾ ನಮ್ಮನ್ನು ಅಪಾಯಕ್ಕೆ ಒಡ್ಡುತ್ತಲೇ ಇರುತ್ತದೆ. ಆ ಕಾರಣಕ್ಕೆ ನಮಗೆ ತಿಳಿಯದೆ ಇರುವುದನ್ನು ಕೇಳಿ ತಿಳಿಯಬೇಕು.
- ರಾಧಿಕಾ ಕುಂದಾಪುರ