ಪರಿಪೂರ್ಣ ಕಲಾವಿದ ಸತ್ಯ ಹೆಗಡೆ ಹಡಿನಬಾಳ
Team Udayavani, Mar 9, 2018, 7:00 AM IST
ತುಂಬು ಬಾಳು ಬದುಕಿ ಮಾ.1ರಂದು ತೊಂಭತ್ತರ ಅಂಚಿನಲ್ಲಿ ನಮ್ಮನ್ನಗಲಿದ ಹಡಿನಬಾಳ ಸತ್ಯ ಹೆಗಡೆ ಶ್ರೇಷ್ಠ ಯಕ್ಷಗಾನ ಕಲಾವಿದ, ಕಲಾಸಂಘಟಕ.ಹೊನ್ನಾವರದ ಸಮೀಪದ ಹಡಿನಬಾಳ ಅವರ ಹುಟ್ಟೂರು. ಆ ಊರಿನ ಮರೊಳ್ಳೆಯವರಾದ ಅವರು ಆ ಭಾಗದಲ್ಲಿ ಮರೊಳ್ಳೆ ಸತ್ಯ ಹೆಗಡೆ ಎಂದೇ ಪರಿಚಿತರು. ಅಲ್ಲಿಯ ರಾಮ ಹೆಗಡೆ- ಸಾವಿತ್ರಿ ದಂಪತಿ ಪುತ್ರರಾಗಿ ಜನಿಸಿದ್ದು 1928ರಲ್ಲಿ. ಕಡು ಬಡತನದೊಂದಿಗೆ ಹೋರಾಡಿ ಬದುಕು ಕಟ್ಟಿಕೊಂಡ ಅವರಿಗೆ ಓದಲು ಸಾಧ್ಯವಾದುದು ಬರೇ ಎರಡನೇ ತರಗತಿಯವರೆಗೆ ಮಾತ್ರ. ಆದರೆ ಜೀವನಾನುಭವ ತುಂಬಾ ಕಲಿಸಿತು. ಕೆರೆಮನೆ ಶಿವರಾಮ ಹೆಗಡೆಯವರು ಅವರು ಯಕ್ಷಗಾನಕ್ಕೆ ಬರಲು ಪ್ರೇರಕರಾದರು. ಮುಂದೆ ಗೋಪಿ ನಾರಾಯಣ ಹೆಗಡೆಯವರಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸಮಾಡಿ ಒಂದು ವರ್ಷ ಇಡಗುಂಜಿ ಮೇಳದಲ್ಲಿ ತಿರುಗಾಟ. ಮುಂದೆ ನಾಲ್ಕೂವರೆ ದಶಕಗಳ ಕಾಲ ಗುಂಡುಬಾಳದಲ್ಲಿ ಕಲಾಸೇವೆಗೈದರು. 13 ವರ್ಷ ಮೇಳದ ಯಜಮಾನರಾಗಿ ಕಾರ್ಯ ನಿರ್ವಹಿಸಿದರು. ಅತ್ಯಂತ ಕಡಿಮೆ ವೀಳ್ಯದಲ್ಲಿ ಮೇಳವನ್ನು ತೂಗಿಸಿಕೊಂಡು ಹೋಗುವುದು ಸುಲಭದ ಕೆಲಸ ವಲ್ಲ. ಯಕ್ಷಗಾನ ಅವರಿಗೆ ಲಾಭದ ವ್ಯವಹಾರವಾಗಿ ರಲಿಲ್ಲ. ಕೇವಲ ಕಲೆಯ ಪ್ರೀತಿ ಯಿಂದ ತಪಸ್ಸಿನಂತೆ ಅದನ್ನು ಮಾಡಿದರು.
ಅವರ ಆಳಂಗ ಯಕ್ಷಗಾನಕ್ಕೆ ಹೇಳಿ ಮಾಡಿಸಿದಂತೆ ಇತ್ತು. ಕಾಂತಿಯುಕ್ತ ಕಣ್ಣುಗಳು, ವಿಶಾಲ ಹಣೆ, ಹರವಾದ ಎದೆ, ಸ್ವರ, ಎಲ್ಲವೂ ಯಕ್ಷಗಾನಕ್ಕೆ ಅನುಕೂಲವಾಗಿತ್ತು. ಎಲ್ಲ ರೀತಿಯ ಪಾತ್ರಗಳನ್ನು ಮಾಡಿ ಗೆದ್ದರು. ನಾಯಕ ಪಾತ್ರಗಳೆಂತೋ, ಪ್ರತಿನಾಯಕ ಪಾತ್ರಗಳಿಗೂ ಸೈ. ಸಾತ್ವಿಕ ಪಾತ್ರಗಳಂತೆ ತಾಮಸ ಸ್ವಭಾವದ ಪಾತ್ರಗಳನ್ನೂ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತಿದ್ದರು. ದಶರಥ, ಕೃಷ್ಣ, ಕರ್ಣ, ಕೌರವ, ಅರ್ಜುನ, ಹನುಮಂತ, ದುಷ್ಟಬುದ್ಧಿ, ದುರ್ಜಯ, ಕೈಲಾಸ ಶಾಸ್ತ್ರಿ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹನುಮಂತನ ಪಾತ್ರದಲ್ಲಿ ವಿಶೇಷ ಸಿದ್ಧಿ ಅವರಿಗಿತ್ತು. ರಂಗಕಲೆಯ ನಾಲ್ಕು ಅಂಗಗಳಾದ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಎಲ್ಲದರಲ್ಲೂ ಸಮಾನ ಸಿದ್ಧಿ ಪಡೆದ ಅಪೂರ್ವ ಕಲಾವಿದರಾಗಿದ್ದರು. ಗುಂಡುಬಾಳದಲ್ಲಿ ವ್ಯವಸ್ಥಿತ ಕಲಿಕಾಕೇಂದ್ರ ಇಲ್ಲದಿದ್ದರೂ ಹಿರಿಯ ಕಲಾವಿದರನ್ನು ನೋಡುತ್ತಾ ಕಿರಿಯರಿಗೆ ರಂಗ ತಾಲೀಮು ಸಿಗುತ್ತಿತ್ತು. ತಮ್ಮ ನಾಲ್ಕು ದಶಕಗಳ ಕಲಾ ವ್ಯವಸಾಯದಲ್ಲಿ ಅನೇಕರನ್ನು ತಿದ್ದಿ ಕಲಾವಿದರನ್ನಾಗಿ ರೂಪಿಸಿದ್ದಾರೆ. ಪ್ರಸಿದ್ಧ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ ಅವರಿಗೆ ಸೋದರಳಿಯ. ಗುಂಡುಬಾಳದಲ್ಲಿ ಅವರ ಗರಡಿಯಲ್ಲಿ ಸಿದ್ಧಗೊಂಡವರು. ಅವರೊಬ್ಬ ಒಳ್ಳೆಯ ಜ್ಯೋತಿಷಿ. ದೈವಾರಾಧಕರು. ಕಷ್ಟದಲ್ಲಿ ತನ್ನಲ್ಲಿಗೆ ಬಂದವರನ್ನು ತಮ್ಮದೇ ಆದ ಕ್ರಮದಲ್ಲಿ ಸಾಂತ್ವನ ಹೇಳಿ ಚಿಕಿತ್ಸೆ ನೀಡುವ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದರು. ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕೌನ್ಸಿಲಿಂಗ್ ಮಾಡುವ ಕಲೆಯಲ್ಲಿ ಪರಿಣತರಾಗಿದ್ದರು. ನೊಂದ ಅನೇಕರು ಇವರಿಂದ ನೆಮ್ಮದಿಯ ಬಾಳು ಕಂಡುಕೊಂಡಿದ್ದಾರೆ.ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಅವರ ಕಲಾಸಾಧನೆಗೆ ಸಂದಿದೆ. ಅವರಿಗೆ 70 ತುಂಬಿದ ಸಂದರ್ಭದಲ್ಲಿ ಊರ ಅಭಿಮಾನಿಗಳು ಕಾರ್ಯಕ್ರಮ ನಡೆಸಿ ಸತ್ಯಲೋಕವೆಂಬ ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ.
ನಾರಾಯಣ ಎಂ. ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ