ಸೋಲಿನಿಂದ ಪಾರಾಗಲು ಮೈದಾನದಿಂದ ಪೇರಿ ಕಿತ್ತೆವು!
Team Udayavani, Apr 2, 2019, 6:00 AM IST
ಫೀಲ್ಡಿಂಗ್ಗೆ ನಿಂತಿದ್ದ ನಾವೆಲ್ಲ, ಅಲ್ಲಿದ್ದ ಬ್ಯಾಟು ಬಾಲು ಹಾಗೂ ಇತರೆ ವಸ್ತುಗಳನ್ನು ನಿಧಾನವಾಗಿ ಕೈಗೆತ್ತಿಕೊಂಡು ಮೈದಾನದಿಂದ ಓಡಲು ಶುರು ಮಾಡಿದೆವು. ಪಾಪ, ಬೌಲಿಂಗ್ಗೆಂದು ನಿಂತಿದ್ದ ಗೆಳೆಯನಿಗೆ ಓಡಿ ಹೋಗುವ ನಮ್ಮ ಪ್ಲಾನ್ ಗೊತ್ತಾಗುವಷ್ಟರಲ್ಲಿ, ಆತ ಎದುರಾಳಿ ತಂಡದವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟ!
ಇದು ನನ್ನ ಬಾಲ್ಯದಲ್ಲಿ ನಡೆದ ಘಟನೆ. ನಮ್ಮ ಬಾಲ್ಯ ಈಗಿನ ಹಾಗಿರಲಿಲ್ಲ. ಈಗಿನ ಮಕ್ಕಳಿಗೆ ಆಟ ಎಂದರೆ ಮೊಬೈಲ್ ಒಂದೇ. ಆದರೆ ನಾವು ಕ್ರಿಕೆಟ್, ಮರಕೋತಿ, ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ ಆಡುತ್ತಾ ಬೆಳೆದೆವು. ಆಗ ನಾನು ಪ್ರಾಥಮಿಕ ಶಾಲೆಯಲ್ಲಿ¨ªೆ. ನಮ್ಮ ಗೆಳೆಯರ ಗುಂಪಿನಲ್ಲಿ ಎಲ್ಲರಿಗೂ ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿತ್ತು. ರವಿವಾರ ಬಂತೆಂದರೆ ಸಾಕು; ಬ್ಯಾಟು ಬಾಲು ಹಿಡಿದು ಮೈದಾನಕ್ಕೆ ಇಳಿಯುತಿದ್ದೆವು. ಬೆಳಗ್ಗೆಯಿಂದ ಸಂಜೆವರೆಗೂ ಆಟ ಸಾಗುತ್ತಿತ್ತು. ಇನ್ನೇನು ರಾತ್ರಿಯೇ ಆಯ್ತು ಅನ್ನುವಾಗ ನಿಧಾನ ಮನೆ ಕಡೆಗೆ ಹೋಗುತ್ತಿದ್ದೆವು. ಲೇಟಾಗಿ ಮನೆ ಸೇರಿ ಅಪ್ಪ-ಅಮ್ಮನಿಂದ ಬೈಯಿಸಿಕೊಂಡಿದ್ದೂ ಇದೆ. ಏನೋ ಆಡುವ ಹುಡುಗರಲ್ವಾ ಅಂತ ಅವರೂ ಜಾಸ್ತಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನನ್ನಜ್ಜ ಮಾತ್ರ ಕ್ರಿಕೆಟ್ನ ಕಟ್ಟಾ ವಿರೋಧಿ. ಆಡುವುದಾದರೆ ಬೇರೆ ಯಾವುದಾದರೂ ಆಟ ಆಡಿ. ಚೆಂಡು- ಬ್ಯಾಟಿನ ಆಟ ಮಾತ್ರ ಬೇಡ ಅನ್ನುತ್ತಿದ್ದ. ತಲೆ, ಕಣ್ಣಿಗೇನಾದರೂ ಚೆಂಡು ಬಡಿದು ಪೆಟ್ಟಾದರೆ ಏನು ಗತಿ ಎಂಬುದು ಅಜ್ಜನ ಆತಂಕವಾಗಿತ್ತು.
ನಾವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು. ನಮ್ಮ ತರಗತಿಯವರೆಲ್ಲ ಸೇರಿ, ಆಂಗ್ಲ ಶಾಲೆಯೊಡನೆ ಪಂದ್ಯ ಕಟ್ಟುತಿ¨ªೆವು. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ನಾವು ದುಡ್ಡು ಕಟ್ಟಿ ಆಟ ಆಡುತಿದ್ದೆವು. ಹಾಗಂತ ನಮ್ಮದು ನೂರು-ಸಾವಿರ ರೂ. ಬೆಟ್ ಕಟ್ಟಿಕೊಂಡು ಆಡುವ ಆಟ ಆಗಿರಲಿಲ್ಲ. ಎಲ್ಲರೂ ದುಡ್ಡು ಸೇರಿಸಿದರೂ ಹತ್ತು ರೂಪಾಯಿ ಜಮಾವಣೆಯಾಗುವುದೇ ಕಷ್ಟವಿತ್ತು. ಕೇವಲ ಹತ್ತು ರೂಪಾಯಿಯ ಬೆಟ್ ಕಟ್ಟಿ, ವಿಶ್ವಕಪ್ ಆಡುವವರಂತೆ ಕಣಕ್ಕಿಳಿಯುತ್ತಿದ್ದೆವು. ಆ ಮೊತ್ತವೇ ಆಗ ನಮಗೆ ದೊಡ್ಡದಾಗಿ ಕಾಣುತ್ತಿತ್ತು. ಒಂದು ರೂಪಾಯಿ ಹಾಕಿ ಎರಡು ರೂಪಾಯಿ ಗೆದ್ದರೆ ಸಾವಿರ ರೂಪಾಯಿ ಗೆದ್ದಷ್ಟು ಸಂಭ್ರಮ. ಅದೇ ದುಡ್ಡಿನಿಂದ ತಂಡದವರೆಲ್ಲರೂ ಸೇರಿ ಅಂದು ಚಾಕೊಲೇಟ್- ಬಿಸ್ಕತ್ ಪಾರ್ಟಿ ಮಾಡುತ್ತಿದ್ದೆವು.
ಆದರೆ ಒಮ್ಮೆ ಹೀಗಾಯಿತು… ನಾವು ಬೇರೆ ಶಾಲೆಯ ತಂಡದೊಂದಿಗೆ ಕ್ರಿಕೆಟ್ ಆಡುತಿದ್ದೆವು. ಇಪ್ಪತ್ತು ರೂಪಾಯಿಯ ಬೆಟ್ಟಿಂಗ್ ಕಟ್ಟಿದ್ದೆವು. ಮೊದಲು ಬ್ಯಾಟ್ ಮಾಡಿದ ನಾವು ಕಡಿಮೆ ಮೊತ್ತ ಪೇರಿಸಿ, ಕೈ ಚೆಲ್ಲಿದೆವು. ಎದುರಾಳಿಗಳು ಬ್ಯಾಟಿಂಗ್ಗೆ ಇಳಿದರು. ಅವರು ನೀರು ಕುಡಿದಷ್ಟೇ ಸುಲಭವಾಗಿ ಫೋರ್-ಸಿಕ್ಸ್ ಬಾರಿಸತೊಡಗಿದರು. ಸೋಲು ಕಟ್ಟಿಟ್ಟ ಬುತ್ತಿಯೆಂದು ಆಗ ನಮಗೆ ಖಚಿತವಾಯಿತು. ಪಂದ್ಯದಲ್ಲಿ ಹಾಕಿದ ಇಪ್ಪತ್ತು ರೂಪಾಯಿ ಕೈ ಬಿಟ್ಟು ಹೋಗುತ್ತಲ್ಲಾ ಅಂತ ಭಯ, ಸಂಕಟ ಶುರುವಾಯಿತು. ಮೋಸ ಮಾಡಿಯಾದರೂ ದುಡ್ಡು ಉಳಿಸಿಕೊಳ್ಳಬೇಕು ಅಂತ ನಿರ್ಧರಿಸಿ, ಒಂದು ಉಪಾಯ ಹೂಡಿದೆವು. ಫೀಲ್ಡಿಂಗ್ಗೆ ನಿಂತಿದ್ದ ನಾವೆಲ್ಲ, ಅಲ್ಲಿದ್ದ ಬ್ಯಾಟು ಬಾಲು ಹಾಗೂ ಇತರೆ ವಸ್ತುಗಳನ್ನು ನಿಧಾನವಾಗಿ ಕೈಗೆತ್ತಿಕೊಂಡು ಮೈದಾನದಿಂದ ಓಡಲು ಶುರು ಮಾಡಿದೆವು. ಪಾಪ, ಬೌಲಿಂಗ್ಗೆಂದು ನಿಂತಿದ್ದ ಗೆಳೆಯನಿಗೆ ಓಡಿ ಹೋಗುವ ನಮ್ಮ ಪ್ಲಾನ್ ಗೊತ್ತಾಗುವಷ್ಟರಲ್ಲಿ, ಆತ ಎದುರಾಳಿ ತಂಡದವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟ! ಆ ಕಡೆಯ ಹನ್ನೊಂದು ಆಟಗಾರರೂ ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಹೊಡೆತ ತಿಂದಿದ್ದ ಆ ಆಸಾಮಿ ಒಂದು ವಾರದವರೆಗೂ ಶಾಲೆಯ ಕಡೆ ಮುಖ ಹಾಕಲಿಲ್ಲ. ಅವನಿಗೆಷ್ಟು ಸಿಟ್ಟು ಬಂದಿತ್ತೆಂದರೆ, ಕೊನೆಗೆ ಆತ ನಮ್ಮೊಂದಿಗೆ ಕ್ರಿಕೆಟ್ ಆಡುವುದಕ್ಕೆ ಸ್ವಯಂ ವಿದಾಯ ಘೋಷಿಸಿದ. ಆ ದಿನಗಳನ್ನು ನೆನೆದರೆ ಈಗಲೂ ಮೊಗದ ಮೇಲೆ ನಗು ಅರಳುತ್ತದೆ.
ಅಂಬಿ ಎಸ್ ಹೈಯ್ನಾಳ್, ಮುದನೂರ ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ