ಪ್ರಶಸ್ತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ: ಸಿದ್ದರಾಮಯ್ಯ
Team Udayavani, Aug 8, 2021, 9:00 PM IST
ಬೆಂಗಳೂರು: “ರಾಜೀವ್ಗಾಂಧಿ ಖೇಲ್ ರತ್ನ’ ಪ್ರಶಸ್ತಿ ಹೆಸರು ಬದಲಾವಣೆಗೆ ಮುಂದಾಗಿರುವ ಬಿಜೆಪಿಯ ಕ್ರಮ ದುರುದ್ದೇಶದಿಂದ ಕೂಡಿದ್ದು, ಪ್ರಶಸ್ತಿ ಹೆಸರಿನಲ್ಲಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಭವನದಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ಇದ್ದಾಗ “ಖೇಲ್ ರತ್ನ’ ಪ್ರಶಸ್ತಿ ಆರಂಭಿಸಿದ್ದರು. ಈಗ ಬಿಜೆಪಿಯು ಪ್ರಶಸ್ತಿಯ ಹೆಸರು ಬದಲಾಯಿಸಿ, ಧ್ಯಾನ್ಚಂದ್ ಹೆಸರಿನಲ್ಲಿ ನೀಡಲು ಮುಂದಾಗಿದೆ. ಇದು ದುರುದ್ದೇಶಪೂರಿತಗಿದೆ ಎಂದು ಆರೋಪಿಸಿದರು.
“ಬೇಕಿದ್ದರೆ ಸರ್ಕಾರವು ಧ್ಯಾನ್ಚಂದ್ ಹೆಸರಿನಲ್ಲಿ ಖೇಲ್ ರತ್ನಕ್ಕಿಂತ ದೊಡ್ಡ ಪ್ರಶಸ್ತಿ ನೀಡಲಿ. ಆದರೆ, ಈಗಿರುವುದನ್ನು ಬದಲಾಯಿಸಿ ಹೊಸ ಹೆಸರಿನಲ್ಲಿ ಪ್ರದಾನ ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟಕ್ಕೂ ಅಷ್ಟಕ್ಕೂ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಕ್ರೀಡಾಂಗಣ ಇದೆ. ದೆಹಲಿಯಲ್ಲಿ ಜೇಟ್ಲಿ ಹೆಸರಿನಲ್ಲಿ ಕ್ರೀಡಾಂಗಣ ಇದೆ. ದೀನ್ದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಮೇಲ್ಸೇತುವೆ ಇದೆ. ಅಷ್ಟೇ ಯಾಕೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಅನೇಕ ಯೋಜನೆಗಳಿವೆ. ಅವುಗಳನ್ನು ನಾವು ಬದಲಾವಣೆ ಮಾಡಿದ್ದೇವೆಯೇ? ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಇದನ್ನೂ ಓದಿ:ಆಗಸ್ಟ್ 11 ದರ್ಶನ್ ಅವರಿಗೆ ವಿಶೇಷವಾದ ದಿನ : ಸಂಭ್ರಮಕ್ಕೆ ಸಜ್ಜಾಗಿದೆ ‘ಡಿ ಬಾಸ್’ ಪಡೆ
“ಎಲ್ಲವೂ ಸರಿ ಇಲ್ಲ’
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವ್ಯಕ್ತವಾಗುತ್ತಿರುವ ಖಾತೆ ಹಂಚಿಕೆ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಅವರವರ ಆಂತರಿಕ ವಿಚಾರ. ಆದರೆ ಇಷ್ಟು ಮಾತ್ರ ಸ್ಪಷ್ಟ ಮತ್ತು ನಿಜ, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಮುಖ್ಯಮಂತ್ರಿ ಮಾಡಿರುವುದಕ್ಕೂ ಅಸಮಾಧಾನವಿದೆ. ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿರುವುದಕ್ಕೂ ಬೇಸರ ಇದೆ. ಯಾವಾಗ ಏನು ಆಗುತ್ತದೆ ಎಂಬುದನ್ನು ಹೇಳಲಾಗದು. ಯಾವತ್ತಾದರೂ ಒಂದು ದಿನ ಸ್ಫೋಟ ಆಗಲಿದೆ.