Udupi; ಭಾರತ, ಸನಾತನ ಧರ್ಮ ಉಳಿವಿಗಾಗಿ ಬಿಜೆಪಿ ಗೆಲ್ಲಿಸಿ: ಬಸನಗೌಡ ಯತ್ನಾಳ್
ಉಡುಪಿ- ಚಿಕ್ಕಮಗಳೂರಿಗೆ ಕೋಟ, ದಕ್ಷಿಣ ಕನ್ನಡಕ್ಕೆ ಚೌಟ ಹಾಗೂ ಕಾಂಗ್ರೆಸ್ಗೆ ಗೂಟ
Team Udayavani, Apr 4, 2024, 1:29 AM IST
ಉಡುಪಿ: ಕಾಂಗ್ರೆಸ್ ಹಿಂದೂ ವಿರೋಧ ಸಿದ್ಧಾಂತ ಅನುಸರಿಸಿಕೊಂಡು ಬರುತ್ತಿದೆ. ಭಾರತ, ಸನಾತನ ಧರ್ಮದಉಳಿವಿನ ಚುನಾವಣೆ ಇದಾಗಿದೆ. ಉಡುಪಿ-ಚಿಕ್ಕಮಗಳೂರು ಮತ್ತು ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ
ಅಭ್ಯರ್ಥಿಗಳು ಸ್ಪಷ್ಟ ಬಹುಮತದೊಂ ದಿಗೆ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಡಿಯಾಳಿಯಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದುತ್ವ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಕೇಂದ್ರದ ಕಳೆದ 10 ವರ್ಷದ ಅಭಿವೃದ್ಧಿ ಕಾರ್ಯ ಕೇವಲ ಟ್ರೈಲರ್. ಮುಂದಿನ 5 ವರ್ಷ ನಿಜವಾದ ಸಿನೆಮಾ. ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ದ.ಕ.ದಲ್ಲಿ ಬೃಜೇಶ್ ಚೌಟ್ ಜಯಶಾಲಿ ಯಾಗಲಿದ್ದಾರೆ. ಒಟ್ಟಿನಲ್ಲಿ ಉಡುಪಿ- ಚಿಕ್ಕಮಗಳೂರಿಗೆ ಕೋಟ, ದಕ್ಷಿಣ ಕನ್ನಡಕ್ಕೆ ಚೌಟ ಹಾಗೂ ಕಾಂಗ್ರೆಸ್ಗೆ ಗೂಟ ಎಂದು ಹೇಳಿದರು.
ಪ್ರಧಾನಿ ಮೋದಿ ಭ್ರಷ್ಟರ ಬಿಡುವುದಿಲ್ಲ. ಈಗ ಕೇಜ್ರಿವಾಲ್ ಜೈಲು ಸೇರಿದ್ದಾರೆ. ಮುಂದೆ ಡಿಂಗ್ರಿವಾಲ್ ಕೂಡ ಜೈಲಿಗೆ ಹೋಗಲಿದ್ದಾರೆ. ನಿಷ್ಠಾವಂತಕಾರ್ಯಕರ್ತರಿಗೆ ಟಿಕೆಟ್ ನೀಡುವುದು ಬಿಜೆಪಿ ಮಾತ್ರ. ಕಾಂಗ್ರೆಸ್ನಲ್ಲಿ ಸಚಿವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಕೊಡಿಸಿ, ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಂಡಿದ್ದಾರೆ ಎಂದರು.
ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಕೇಂದ್ರ ಸರಕಾರದ ನೀತಿ, ಮೋದಿಯ ವರ ನೇತೃತ್ವ, ರಾಷ್ಟ್ರದ ಬಗ್ಗೆ ಇರುವ ನಮ್ಮನಿಯತ್ತು ಹಾಗೂ ಜನರ ಬಗ್ಗೆ ಇರುವ ನಮ್ಮ ಬದ್ಧತೆಯ ಆಧಾರದಲ್ಲಿ ಚುನಾ ವಣೆ ಎದುರಿಸಲಿದ್ದೇವೆ ಎಂದರು.
ಭವಿಷ್ಯ ಬರೆಯುವ ಚುನಾವಣೆ
ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇದು ಭಾರತದ ಭವಿಷ್ಯ ಬರೆಯುವ ಚುನಾವಣೆ. ದೇಶದ ರಕ್ಷಣೆ, ಸ್ವಾರ್ಥ ರಹಿತ ರಾಜಕಾರಣ, ಭಯೋತ್ಪಾದನೆ ನಿರ್ಮೂಲನೆಗೆ ಮೋದಿ ಮತ್ತೂಮ್ಮೆ ಪ್ರಧಾನಿಯಾಬೇಕು. ಅವರು ರಾಜಕಾರಣವನ್ನು ವೃತ್ತಿಯಾಗಿ ಮಾಡದೇ ವ್ರತವಾಗಿ ಸ್ವೀಕರಿಸಿದ್ದಾರೆ. ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ದ.ಕ. ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ, ಶಾಸಕರಾದ ವಿ. ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ,ಮಾಜಿ ಸಚಿವರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ,
ಕೃಷ್ಣ ಜೆ. ಪಾಲಿಮಾರ್, ಪ್ರಮೋದ್ ಮಧ್ವರಾಜ, ವಿ.ಪರಿಷತ್ ಉಪಸಭಾಪತಿಎಂ.ಕೆ. ಪ್ರಾಣೇಶ್, ಸದಸ್ಯ ಭೋಜೇ ಗೌಡ, ಪ್ರತಾಪ್ ಸಿಂಹ ನಾಯಕ್, ಮಾಜಿಶಾಸಕರಾದ ಜೀವರಾಜ್, ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪ್ರಮುಖರಾದ ನವೀನ್ ಶೆಟ್ಟಿ ಕುತ್ಯಾರು, ರಂಜನ್ ಅಜಿತ್ ಕುಮಾರ್, ಶಿಲ್ಪಾ ಜಿ. ಸುವರ್ಣ, ಕಲ್ಮೂರುಡಪ್ಪ, ಮಣಿರಾಜ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಮಟ್ಟಾರು ರತ್ನಾಕರ ಹೆಗ್ಡೆ, ಮನೋಹರ ಕಲ್ಮಾಡಿ ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ನಿರೂಪಿಸಿ, ರೇಷ್ಮಾ ಉದಯ ಶೆಟ್ಟಿ ವಂದಿಸಿದರು.
ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು
ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ನ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಭಾರತ ಮಾತೆ, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಅಭ್ಯರ್ಥಿ ಪರ ಘೋಷಣೆ ಮುಗಿಲು ಮುಟ್ಟಿತ್ತು. ವೇದಿಕೆಯು ಬಿಜೆಪಿ-ಜೆಡಿಎಸ್ ಮುಖಂಡರ ಸಮಾಗಮಕ್ಕೆ ಸಾಕ್ಷಿಯಾಯಿತು.