24 ಮಂದಿ ಪ್ರಾಣ ಉಳಿಸಿ ಹುತಾತ್ಮನಾದ ಗೋಕಾಕ ಯೋಧ
Team Udayavani, Oct 22, 2018, 6:50 AM IST
ಬೆಳಗಾವಿ/ಗೋಕಾಕ: ಮಣಿಪುರನ ಇಂಫಾಲ್ ನಗರದ ಮಾರುಕಟ್ಟೆಯಲ್ಲಿ ಹೊರಟಿದ್ದ ವಾಹನದಲ್ಲಿ ನಕ್ಸಲರು ಇಟ್ಟ ಗ್ರೆನೈಡ್ ಸ್ಫೋಟ ತಪ್ಪಿಸಿ 24 ಜನರ ಜೀವ ಉಳಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಯೋಧ ಹುತಾತ್ಮನಾಗಿದ್ದಾನೆ.
ಗೋಕಾಕನ ಅಲೆಮಾರಿ ಸಮುದಾಯದ ಸಿಆರ್ಪಿಎಫ್ ಯೋಧ ಉಮೇಶ ಮಹಾನಿಂಗ ಹೆಳವರ(25) ಹುತಾತ್ಮ ಯೋಧ. ಮಣಿಪುರದ ಸಿಆರ್ಪಿಎಫ್ 143 ಬಟಾಲಿನ್ನಲ್ಲಿ 6 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಉಮೇಶ ಶನಿವಾರವಷ್ಟೇ ತವರಿಗೆ ಆಗಮಿಸುವ ಸಿದ್ಧತೆ ನಡೆಸಿದ್ದ. ಆದರೆ ವಿಧಿಯಾಟದಿಂದಾಗಿ ಹುತಾತ್ಮನಾಗಿ ಮರಳುತ್ತಿರುವುದು ದುರ್ದೈವವೇ ಸರಿ.
ಗೋಕಾಕ ಅಂಬೇಡ್ಕರ್ ನಗರದ ನಿವಾಸಿ ಉಮೇಶ ಅವರ ತಂದೆ ಮಹಾನಿಂಗ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿದ್ದಾರೆ. ಮಗ ಸೈನ್ಯ ಸೇರಿ ದೇಶ ಸೇವೆ ಮಾಡುವುದನ್ನು ತಂದೆ ಮಹಾನಿಂಗ ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು. ನೌಕರಿ ಸೇರಿದ ಬಳಿಕ ಗೋಕಾಕದಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗಿದೆ. ಗೃಹಪ್ರವೇಶ ಇದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ರೈಲು ಮೂಲಕ ತವರಿಗೆ ಆಗಮಿಸುವ ಸಿದ್ಧತೆ ನಡೆಸಿದ್ದ.
1993ರಲ್ಲಿ ಅಲೆಮಾರಿ ಸಮುದಾಯದಲ್ಲಿ ಜನಿಸಿದ ಉಮೇಶ ಸರ್ಕಾರಿ ಪಿಯು ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ್ದು, 2012ರಲ್ಲಿ ಸಿಆರ್ಪಿಎಫ್ ಯೋಧನಾಗಿ ಸೈನ್ಯಕ್ಕೆ ಸೇರಿದ್ದ. ಇಬ್ಬರು ಸಹೋದರರು ಪದವಿ ಮುಗಿಸಿದ್ದು, ನೌಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಉಮೇಶನೇ ಮನೆಯ ಹಿರಿಯ ಮಗ. ಮಗನನ್ನು ಕಳೆದುಕೊಂಡಿರುವ ಸುದ್ದಿ ಕುಟುಂಬಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರ ಗೋಕಾಕ ನಗರಕ್ಕೆ ಸೋಮವಾರ ಬೆಳಗ್ಗೆ ಆಗಮಿಸಲಿದ್ದು, ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆ ನಗರದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಯೋಧನ ಸಾವಿನ ಸುದ್ದಿ ತಿಳಿದು ತಹಶೀಲ್ದಾರ್ ಜಿ.ಎಸ್. ಮಳಗಿ, ಪೌರಾಯುಕ್ತ ಎಂ.ಎಚ್. ಅತ್ತಾರ, ನಗರಸಭೆ ಸದಸ್ಯೆ ವೆಂಕವ್ವ ಶಾಸ್ತ್ರಿಗೊಲ್ಲರ ಸೇರಿದಂತೆ ಅನೇಕರು ಯೋಧನ ಮನೆಗೆ ಭೇಟಿ ನೀಡಿ ಸ್ವಾಂತನ ಹೇಳಿದ್ದಾರೆ.
ಸರ್ಕಾರಿ ಜಾಗದಲ್ಲಿಯೇ ಅಂತ್ಯಕ್ರಿಯೆಗೆ ಆಗ್ರಹ: ಯೋಧನ ಅಂತ್ಯಕ್ರಿಯೆ ಸರ್ಕಾರಿ ಜಾಗದಲ್ಲಿಯೇ ಮಾಡಬೇಕೆಂದು ಕುಟುಂಬಸ್ಥರು ಹಾಗೂ ನಗರದ ಹಲವು ಸಂಘಟನೆಗಳು ಆಗ್ರಹಿಸಿವೆ. ಆದರೆ ಇದನ್ನು ನಿರಾಕರಿಸಿರುವ ತಾಲೂಕಾಡಳಿತ, ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಆಗುವುದಿಲ್ಲ. ಸದ್ಯ ಖಾಸಗಿ ಜಾಗದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
ನಂತರ ತಾವು ಹೇಳಿದ ಜಾಗದಲ್ಲಿ ಯೋಧನ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಇದಕ್ಕೆ ಎಲ್ಲರೂ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ತಹಶೀಲ್ದಾರ್ ಮಾತಿಗೆ ಒಪ್ಪದ ಸಂಘಟನೆಗಳು ರಾತ್ರಿವರೆಗೂ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದವು. ಆದರೆ ಕೆಲವು ಕಿಡಿಗೇಡಿಗಳು ಮಿನಿವಿಧಾನಸೌಧ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕಿಟಕಿ ಗಾಜು ಒಡೆದಿದ್ದು, ಜತೆಗೆ ಓರ್ವ ಪತ್ರಕರ್ತನ ಕಾಲಿಗೂ ಕಲ್ಲೇಟು ಬಿದ್ದಿದೆ.
ಸದಾ ಹಸನ್ಮುಖೀಯಾಗಿದ್ದ ನನ್ನ ಗೆಳೆಯ ಎಲ್ಲರೊಂದಿಗೂ ಬೆರೆಯುತ್ತಿದ್ದ. ಆತನ ಸಾವಿನ ಸುದ್ದಿ ನಮಗೆ ನಂಬಲಾಗುತ್ತಿಲ್ಲ, ಕಳೆದ ತಿಂಗಳು ರಜೆ ಮೇಲೆ ಬಂದಿದ್ದ. ಅವನ ಜನ್ಮದಿನವನ್ನು ಗೆಳೆಯರೆಲ್ಲರೂ ಸೇರಿ ಆಚರಿಸಿ ಸಂಭ್ರಮಿಸಿದ್ದೇವು. ಗೆಳೆಯ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದು ಆತ ಅಜರಾಮವಾಗಲಿ ಎನ್ನುತ್ತಾರೆ ಯೋಧ ಉಮೇಶನ ಸ್ನೇಹಿತ ಸಿದ್ಧಾರೂಢ ಖಾನಪ್ಪನವರ.
– ಭೈರೋಬಾ ಕಾಂಬಳೆ/ಮಲ್ಲಪ್ಪ ದಾಸಪ್ಪಗೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ‘ಕೋಟಿ’ಯಿಂದ ಬಂತು ಜನತಾ ಸಿಟಿ; ಧನಂಜಯ್ ನಟನೆಯ ಸಿನಿಮಾ
Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ಡೈರಿ
T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್
Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು
Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್