ನೀರೆಯ ಸೀರೆ ಮತ್ತು ಇತರ ಕತೆಗಳು
Team Udayavani, Mar 15, 2019, 12:30 AM IST
ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ , ಚಿಂದಿಯಾದರೆ ಲಕ್ಷಾಂತರ ದೀಪ ಉರಿಸುವ ಬತ್ತಿ! ಸೀರೆ ನೆಮ್ಮದಿ, ಸೌಂದರ್ಯ, ಸಾರ್ಥಕತೆಯ ಅನುಭವ ನೀಡುತ್ತಲೇ ಅವಮಾನ, ಸಂಕಟ, ನೋವು, ಶೋಷಣೆಗಳಿಗೂ ಕಾರಣವಾಗಿಬಿಡುತ್ತದೆ.
ಜಗತ್ತಿನ ಜನರೆಲ್ಲ ಕಂಡ ಕಂಡದ್ದನ್ನೆಲ್ಲ ಅಧ್ಯಾತ್ಮ ಎನ್ನುವಾಗ ನಾನೇಕೆ “ಸೀರೆ ಎಂಬ ಅಧ್ಯಾತ್ಮ’ ಅನ್ನಬಾರದು ಎನ್ನಿಸಿತು. ನನ್ನದು ಮೋಹಭರಿತವಾದದ್ದು ! ಬದುಕಿನ ಸಣ್ಣಪುಟ್ಟ ಸಂತಸಗಳನ್ನು ಬಿಡದೇ ಅನುಭವಿಸುವ ಹುಚ್ಚಿರುವ ನನಗೆ ಅಧಿಕಾರ, ಹಣ ಇತ್ಯಾದಿ ಮೋಹಗಳೆಲ್ಲ ತೀರಾ ಚಿಕ್ಕ ವಯಸ್ಸಿನಲ್ಲಿ “ಬಾಹುಬಲಿಯ’ ಪಾಠ ಮಾಡಿ ಮಾಡಿ ತೊಲಗಿಹೋದವು. ಅಧಿಕಾರದ ಕುರ್ಚಿ ಮುಳ್ಳಿನ ಸಿಂಹಾಸನದಂತೆ ತೋರುತ್ತಿದ್ದುದರಿಂದ ಅಲ್ಲಿ ಕುಳಿತುಕೊಳ್ಳುವ ಬದಲು ವಿದ್ಯಾರ್ಥಿಗಳ ಜೊತೆ ಕಾರಿಡಾರ್ನಲ್ಲಿ ಓಡಾಡುತ್ತ, ತರಗತಿಗೆ ಹೋಗುತ್ತ, ಸ್ಟಾಫ್ರೂಮ್ನಲ್ಲಿ ಹರಟುತ್ತ ನಿರಾಳವಾಗಿಬಿಡುತ್ತಿದ್ದೆ. ಯಾರಿಗೋ ಪ್ರಶಸ್ತಿ ಬಂದರೆ, ಯಾರೋ ಏನನ್ನೋ ಸಾಧಿಸಿದರೆ ಒಳಗೆ ಸಣ್ಣದೊಂದು ಪೈಪೋಟಿಯ ಕಿಚ್ಚು ಸಹ ಹುಟ್ಟಿಕೊಳ್ಳದೆ ಆರಾಮವಾಗಿ ಅಭಿನಂದನೆ ಹೇಳಿ ಮುಂದಿನ ಕೆಲಸಕ್ಕೆ ಹೋಗುತ್ತಿದ್ದೆ.
ಆದರೆ ಆದರೆ… ಯಾವುದಾದರೂ ಚಂದದ ಸೀರೆಯನ್ನು ನೋಡಿದರೆ, ಅದು ಯಾವ ಊರಿನದ್ದು , ಅದರ ವಿಶೇಷತೆ ಏನು, ಅದು ಎಲ್ಲಿ ಸಿಗುತ್ತದೆ, ಕೈಗೆಟಕುವ ಬೆಲೆಯದ್ದೇ, ಕೈಮಗ್ಗದ ಸೀರೆಯೇ ಇತ್ಯಾದಿ ವಿಷಯಗಳನ್ನು ಹುಚ್ಚಿಯಂತೆ ಕಲೆ ಹಾಕುತ್ತಿದ್ದೆ. ಇದಕ್ಕಾಗಿ ವ್ಯಯಿಸಿದ್ದ ಸಮಯವನ್ನು ಜೀವನದಲ್ಲಿ ಬರೆಯುವುದಕ್ಕೆ ಮೀಸಲಾಗಿರಿಸಿದ್ದರೆ ಬಹುಶಃ ನನ್ನ ಪುಸ್ತಕಗಳ ಸಂಖ್ಯೆ ಹೆಚ್ಚಿರುತ್ತಿತ್ತೋ ಏನೋ.
ಕೆಲಸಕ್ಕೆ ಸೇರಿದ ಆರಂಭದಲ್ಲಿ ಬಿಟಿಎಸ್ ಬಸ್ಸಿನಲ್ಲಿ ಕಿಟಕಿಯ ಪಕ್ಕದಲ್ಲಿ ಕೂತು, ಯಾವ್ಯಾವ ಅಂಗಡಿಯ ಮುಂದೆ ಯಾವ ಯಾವ ಬಣ್ಣದ ಸೀರೆ ನೇತು ಹಾಕಿದ್ದಾರೆ ಎಂದು ನೋಡಿಕೊಂಡು ಹೋಗುತ್ತಿದ್ದೆ. ನನ್ನ ಸಹೋದ್ಯೋಗಿಗಳೆಲ್ಲ ಚಿನ್ನ , ಸೈಟು ಎಂದು ಓಡಾಡುತ್ತಿದ್ದರೆ, ಅದ್ಯಾವುದರ ಬಗ್ಗೆಯೂ ಮೂರು ಕಾಸಿನ ಆಸಕ್ತಿ ಅಂದಿಗೂ ಇಂದಿಗೂ ಇಲ್ಲದಿರುವ ನಾನು ಮಾತ್ರ ಒಡಿಸ್ಸಾ, ಕಾಶ್ಮೀರಿ, ಪೋಚಂಪಲ್ಲಿ , ಬೆಂಗಾಲಿ ಕಾಟನ್, ಮಂಗಲಗಿರಿ, ನಾರಾಯಣಪೇಟೆ, ಇಳಕಲ್, ಗುರ್ಜರಿ, ಚಿಕನ್ ವಾಯಿಲ್, ಬ್ರುಶೋ, ಮಣಿಪುರಿ ಹ್ಯಾಂಡ್ಲೂಮ್, ಟಸ್ಸರ್ ಸಿಲ್ಕ್ , ಮುಗಾಸಿಲ್ಕ್ ಕಾಂತಾ ವರ್ಕ್, ಹ್ಯಾಂಡ್ಲೂಮ್ ಮೇಲೆ ಮಧುಬನಿ ಪ್ರಿಂಟ್, ಪೇಂಟಿಂಗ್ ಎಂದು ಲೆಕ್ಕವಿರದಷ್ಟು ಹೆಸರಿನ ಸೀರೆಗಳನ್ನು ಹುಡುಕಿಕೊಂಡು “ನೀವು ಕಾಣಿರೆ? ನೀವು ಕಾಣಿರೆ?’ ಎಂದು ತಿರುಗುತ್ತಿದ್ದೆ . ಬಹುಶಃ ಬೆಂಗಳೂರಿನ ಯಾವುದೇ ಅಂಗಡಿಯನ್ನು, ಗಲ್ಲಿಯನ್ನೂ ಬಿಟ್ಟ ನೆನಪಿಲ್ಲ, ಬಳೇಪೇಟೆ, ಚಿಕ್ಕಪೇಟೆಯ ಗಲ್ಲಿಗಳಿಂದ ಹಿಡಿದು ಕಮರ್ಶಿಯಲ್ ಸ್ಟ್ರೀಟ್, ಎಂ.ಜಿ. ರಸ್ತೆಯವರೆಗೆ ನಾವು ನಾಲ್ಕು ಜನ ಅಕ್ಕ-ತಂಗಿಯರ ಕಾರ್ಯಕ್ಷೇತ್ರ ವಿಸ್ತರಿಸಿತ್ತು! ಅಂಗಡಿಗೆ ಹೋದರೆ ಬೇಕಿರಲಿ, ಬೇಡದಿರಲಿ ಎರಡು ಸೀರೆಯನ್ನು ಕೊಳ್ಳುವುದು! ಎಷ್ಟು ಸರಳ ಜೀವನವನ್ನು ನಡೆಸಬಹುದು ಎಂದು ಎಲ್ಲರಿಗೂ ಪಾಠ ಮಾಡುತ್ತಾ, ಸೀರೆಯ ವಿಷಯಕ್ಕೆ ಬಂದ ತಕ್ಷಣ ಅದೆಲ್ಲವನ್ನೂ ಮರೆಯುತ್ತ ಹೋಗುತ್ತಿದ್ದ ನನ್ನ ದುಬುìದ್ಧಿಯನ್ನು ಕಂಡು ನನ್ನ ಮೇಲೆ ನಾನೇ ಸಿಟ್ಟಿಗೆದ್ದಿದ್ದೇನೆ.
ತೀರಾ ಅಪರೂಪವಾಗಿ ಕಾಂಜೀವರಂ, ಮೈಸೂರ್ ಸಿಲ್ಕ್ , ಬನಾರಸ್, ಧರ್ಮಾವರಂ ಸೀರೆಗಳು, ಧರ್ಮರಾಯನ ಗುಡಿಯ ಬಳಿ ಕುಂಬಾರಪೇಟೆಯಲ್ಲಿ ಸೀರೆ ನೇಯುತ್ತಾರೆ ಎಂದು ಅಲ್ಲೂ ಹೋಗಿ ನಮಗೆ ಬೇಕಾದ ಬಣ್ಣದ ಸೀರೆಗಳನ್ನು ನೇಯಿಸಿಕೊಂಡು, ಮಗ್ಗವನ್ನು ನೋಡಿ ಆನಂದಪಟ್ಟಿದ್ದು ಆಯಿತು. ಆ ಸೀರೆಗಳು ತುಂಬಾ ಹೆಚ್ಚಿನ ಬೆಲೆಯದ್ದೇನೂ ಆಗಿರಲಿಲ್ಲ. ನಮ್ಮ ಕಾಲೇಜಿನಲ್ಲಂತೂ “ಇವತ್ತು ಮೇಡಂ ಯಾವ ಸೀರೆ ಉಟ್ಕೊಂಡು ಬರ್ತಾರೆ?’ ಎಂದು ನೋಡಲು, ಪಾಠ-ಪ್ರವಚನ ಇಷ್ಟವಿಲ್ಲದ ಒಂದು ಗುಂಪು ಸದಾ ಕಾಯುತ್ತಿತ್ತು. ತರಗತಿಗೆ ಹೋಗುವಾಗಲೇ ಕಿಟಕಿಯಿಂದ ನೋಡಿ, “ಓಹೋ’ ಎಂದು ಉದ್ಗಾರ ತೆಗೆಯುವುದು, ನಾನೇನೋ ಬಹಳ ಜನಪ್ರಿಯಳೇನೋ ಎಂದು ರೇಗಿ ಹೋಗಿದ್ದ ಮೇಷ್ಟ್ರೊಬ್ಬರು ಇದೇ ಸಮಯದಲ್ಲೇ, “ನೋಡಮ್ಮ , ದಿನಕ್ಕೊಂದು ಸೀರೆ ಉಟ್ಟು ಚೆನ್ನಾಗಿ ಕಾಣಿಸ್ತೀಯ, ನಿನ್ನ ಪಾಠ ಯಾರೂ ಕೇಳಲ್ಲ , ನಿನ್ನ ಸೀರೆ ನೋಡ್ತಾರೆ’ ಎಂದು ಹೇಳಿ ವಾಚಾಮಗೋಚರವಾಗಿ ಬೈಸಿಕೊಂಡಿದ್ದರು!
ಇದರ ಜೊತೆಗೆ ಕಾಲೇಜಿಗೆ ಮತ್ತು ಮನೆಗೆ ಬರುತ್ತಿದ್ದ ಬಂಗಾಳಿ ಬಾಬುಗಳು! ಗಾರ್ಡನ್ ಸೀರೆಯನ್ನು ಕೊಳ್ಳಲು ನಡೆಯುತ್ತಿದ್ದ ನೂಕುನುಗ್ಗಲನ್ನಂತೂ ವರ್ಣಿಸಲು ಸಾಧ್ಯವೇ ಇಲ್ಲ. ಒಬ್ಬೊಬ್ಬರು ಹತ್ತಾರು ಸೀರೆಗಳನ್ನು ಎಳೆದು, ಗುಡ್ಡೆಹಾಕಿಕೊಂಡು, ಯಾವುದೇ ಡ್ಯಾಮೇಜ್ ಇಲ್ಲವೆಂದು ನೋಡಿ, ಒಂದು ಕಡೆ ಇಟ್ಟುಕೊಳ್ಳುವುದು. ಅಷ್ಟರಲ್ಲಿ ನಮ್ಮಂತೆ ಬೇರೆ ಯಾರೋ ಹೊತ್ತುಕೊಂಡು ಹೋಗುತ್ತಿದ್ದ ಸೀರೆಗಳನ್ನು ನೋಡಿ ನಾವದನ್ನು ಕೊಳ್ಳಬೇಕಿತ್ತು ಎಂದು ಕರುಬುವುದು, ಅವರು ಎಸೆಯುವುದನ್ನೇ ಕಾದು ಎತ್ತಿಕೊಂಡು ಬಂದು ಮತ್ತೆ ಎಸೆಯುವುದು. ಎಷ್ಟು ಬಣ್ಣಗಳನ್ನು ಕಣ್ಣಿಗೆ ತುಂಬಿಕೊಂಡರೂ ತಣಿವಿಲ್ಲ , ಅಮ್ಮನಂತೂ, “ನಿನಗೇನೆ ಇಷ್ಟು ಸೀರೆ ಬರ?’ ಎಂದು ಬೈಯುತ್ತಿದ್ದಳು. ಪಾಪ, ಅವಳ ಬಳಿ ಇರುತ್ತಿದ್ದುದೇ ಎರಡೋ ಮೂರೋ ಸೀರೆಯಂತೆ. ವಿಶಾಲಿಗೆ ಮೈಮೇಲೊಂದು, ಗಳುವಿನ ಮೇಲೊಂದು ಸೀರೆ ಎಂದು ಜನ ಆಡಿಕೊಳ್ಳುತ್ತಿದ್ದರಂತೆ. ಬಹುಶಃ ಅಮ್ಮನ ಬಳಿ ಸೀರೆಗಳಿರಲಿಲ್ಲ ಎನ್ನುವುದೇ ನನ್ನ ಮನಸ್ಸನ್ನು ಚುಚ್ಚಿ ಈ ಹುಚ್ಚು ಹಿಡಿಸಿತೋ, ತಿಳಿಯದು. ಎಷ್ಟೋ ಮದುವೆ-ಮುಂಜಿಗಳಿಗೆ ಸೀರೆಯಿಲ್ಲ ಎನ್ನುವ ಕಾರಣಕ್ಕೇ ಅಮ್ಮ ಹೋಗುತ್ತಿರಲಿಲ್ಲವಂತೆ. ಅಮ್ಮನಿಗೆ ತಮಿಳುನಾಡಿನ “ಚುಂಗುಡಿ’ ಸೀರೆ ತುಂಬಾ ಇಷ್ಟ. ಹಾಗಾಗಿ ನಾವೆಲ್ಲ ಅವಳಿಗೆ ಅದನ್ನೇ ಕೊಡಿಸುತ್ತಿದ್ದೆವು.
“ಬಣ್ಣ ಬಣ್ಣ , ನನ್ನ ಒಲವಿನ ಬಣ್ಣ’ ಅಂತ ಹಾಡು ಬಂತಲ್ಲ! ಆಗ ತೊಗೊಳ್ಳಿ , ಜಾರ್ಜೆಟ್ ಶಿಫಾನ್ ಅಂತ “ಪ್ಲೇನ್’ ಸೀರೆಗಳ ಹುಚ್ಚು ಹಿಡಿದು ಹೋಯಿತು. ಒಂದು ದಿನ ಹಸಿರು, ಮತ್ತೂಂದು ದಿನ ಹಳದಿ, ಆಮೇಲೆ ನೀಲಿ ಅಂತೆಲ್ಲ ಸಾಪ್ತಾಹಿಕ ಶುರುವಾಗಿದ್ದು ಮಾಸಿಕದವರೆಗೂ ವಿಸ್ತರಿಸಿತು. ಆನೇಕಲ್ ಕಾಲೇಜಿಗೆ ಹೋಗುವಾಗ ಸೀರೆಯ ಬಣ್ಣದ್ದೇ ಕುಂಕುಮ, ಬಳೆ, ಎರಡು ಜಡೆಗೆ ಅದೇ ಬಣ್ಣದ “ಲವ್ ಇನ್ ಟೋಕಿಯೋ’ ಹೇರ್ಬ್ಯಾಂಡ್! “ಶಿವರಂಜನಿ’, “ಪ್ರತಿಘಟನ’ ಅಂತೆಲ್ಲ ತೆಲುಗು ಸಿನಿಮಾ ಬಂದ ಮೇಲಂತೂ “ಚಂದೇರಿ ಕಾಟನ್’ ಬದುಕಾಯಿತು! ಚಲನಚಿತ್ರಗಳು ಬದಲಾದಂತೆ ಸೀರೆಗಳ ಬಣ್ಣ , ವೈವಿಧ್ಯ ಎಲ್ಲವೂ ಬದಲಾದವು. ವಿಮಲ್ ಸೀರೆಗಳ ಒಂದು ಟ್ರೆಂಡ್ ಶುರುವಾಗಿ, ಪ್ರತಿಯೊಬ್ಬರೂ ಅದನ್ನು ಉಟ್ಟು , ವಿಶೇಷತೆ ಕಳೆದುಕೊಂಡು ಮೂಲೆಗುಂಪಾಯಿತು. ಚೈನಾ ಸಿಲ್ಕ್ ಎಂದು ಸಿಕ್ಕ ಅಂಗಡಿಗಳಿಗೆಲ್ಲ ಓಡಾಡಿದ್ದಾಯಿತು. ಇಳಕಲ್ ಸೀರೆಗೆ ಕಸೂತಿ ಮಾಡಿಸಿದ್ದಾಯಿತು. ಅಪ್ಲಿಕ್ ವರ್ಕ್ ಸೀರೆಗಳು ಮೈಮನವನ್ನು ನಿಜದ ಅರ್ಥದಲ್ಲಿ ಸೂರೆಗೊಂಡಿದ್ದವು. ಕೌದಿ ಹೊಲಿದಂತೆ ಬಣ್ಣ ಬಣ್ಣದ ಬಟ್ಟೆಗಳಿಂದ ವಿನ್ಯಾಸಗಳನ್ನು ಮಾಡಿರುತ್ತಿದ್ದರು. ನಾನಂತೂ ಅದನ್ನು ತಂದು ಬ್ಲೌಸ್ಗೆ ಸಹ ಅದೇ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳುತ್ತಿದ್ದೆ.
ಸೀರೆಯೊಂದು ಭೌತಿಕ, ಅಧ್ಯಾತ್ಮ , ಅಸ್ತಿತ್ವದ ಪ್ರತೀಕವಾಗಿ ಭಾರತದಲ್ಲಿ ರೂಪುಗೊಂಡಿದೆ. ಈ ಸೀರೆಯಲ್ಲಿ ಸ್ಥಾನಮಾನ-ಶೋಷಣೆ, ಬಂಧನ-ಬಿಡುಗಡೆ, ನೆಮ್ಮದಿ-ಉದ್ವಿಗ್ನತೆ ಎಲ್ಲವೂ ಇವೆ. ಅದು ಸುಟ್ಟಾಗ, ಹರಿದಾಗ ಕಳುವಾದಾಗ ಸ್ಫೋಟಗೊಳ್ಳುವುದು, ತಾವಿರುವ ಸ್ಥಿತಿಯನ್ನು ಮೀರಲು ಕನಸಿಗೆ ಸೀರೆಯೇ ಮೂಲವಾಗುವುದು, ಕೌದಿಯಾಗಿ, ಜೋಲಿಯಾಗಿ, ಕುಂಚಿಗಿಯಾಗಿ, ತಲೆದಿಂಬಾಗಿ ವಿವಿಧ ಸ್ವರೂಪಗಳಲ್ಲಿ ರೂಪಾಂತರಗಳಾಗಿ ಕವಿಯ ಅನುಭವದಲ್ಲಿ ಹೊಸ ರೂಪಕವಾಗಿ ನೆಲೆಗೊಳ್ಳುವುದು ಹೀಗೆ. ಸೀರೆ ಸಂಸಾರದಂತೆ ಸುತ್ತಿಕೊಳ್ಳುತ್ತ ಬಂಧನವಾಗುತ್ತ ಹೋಗುವ ರೂಪಕ ಒಂದಾದರೆ, ಅಕ್ಕಮಹಾದೇವಿ ಕಳಚಿಟ್ಟ ಬಂಧನದ ಪ್ರತಿಮೆಯ ಸೀರೆ ಇನ್ನೊಂದು ಬಗೆಯದು. ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವ ಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ , ಚಿಂದಿಯಾದರೆ ಲಕ್ಷಾಂತರ ದೀಪ ಉರಿಸುವ ಬತ್ತಿ! ಸೀರೆ ನೆಮ್ಮದಿ, ಸೌಂದರ್ಯ, ಸಾರ್ಥಕತೆಯ ಅನುಭವ ನೀಡುತ್ತಲೇ ಅವಮಾನ, ಸಂಕಟ, ನೋವು, ಶೋಷಣೆಗಳಿಗೂ ಕಾರಣವಾಗಿಬಿಡುತ್ತದೆ. ಬರಿಯ ಸುಖ ಲೋಲುಪ “ಇಂದ್ರಿಯ ಬದುಕಿನ’ ಸಂಕೇತ ಮಾತ್ರವಲ್ಲ ಈ ಸೀರೆ, ಬಿಚ್ಚಿದರೆ ಬಯಲಾಗಿ ಅಲೌಕಿಕವಾಗುವ ಸಾಮರ್ಥ್ಯ ಇರುವುದರಿಂದಲೇ ಮಹಾಕಾವ್ಯದಿಂದ ಇಂದಿನವರೆಗೂ ಪ್ರಬಲ ರೂಪಕವಾಗಿದೆ.
ಎಂ. ಆರ್. ಕಮಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ