ಅನೌಪಚಾರಿಕ ಶಿಕ್ಷಣ ವಿದ್ಯಾಭ್ಯಾಸಕ್ಕೆ ಪೂರಕವಾಗಿರಲಿ
Team Udayavani, Nov 13, 2019, 5:19 AM IST
ಶಿಕ್ಷಣ ಇಂದು ಮೂಲ ಸೌಕರ್ಯಗಳಲ್ಲಿ ಒಂದಾಗಿದೆ. ಜಗತ್ತಿನಲ್ಲಿ ಜನಿಸುವ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಲಭಿಸಬೇಕೆಂಬುದನ್ನು ಲಿಖೀತ ನಿಯಮವನ್ನು ಕೂಡ ರೂಪಿಸಲಾಗಿದೆ. ಆ ಕಾರಣಕ್ಕಾಗಿಯೇ ಉಚಿತ ಶಿಕ್ಷಣ ನೀಡಲಾಗಿದೆ. ಔಪಚಾರಿಕ ಶಿಕ್ಷಣಗಳು ಇಂದು ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಎಂಬ ಮಾತೊಂದು ಇದೆ. ಔಪಚಾರಿಕ ಶಿಕ್ಷಣದ ಜತೆಗೆ ಅನೌಪಚಾರಿಕ ಶಿಕ್ಷಣಗಳು ಜತೆಗೂಡಿದರೆ ಶಿಕ್ಷಣದ ಮೌಲ್ಯಗಳೂ ಹೆಚ್ಚಾಗುತ್ತವೆ. ಮಕ್ಕಳಿಗೆ ಸಂಸ್ಕಾರದ ಜತೆಗೆ ಶಿಕ್ಷಣ ಲಭಿಸಿದರೆ ಅವರು ಮುಂದೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ.
ಗುರುಕುಲಗಳು ಮಾದರಿಯಾಗಲಿ
ಈ ಹಿಂದೆ ಅನೌಪಚಾರಿಕ ಶಿಕ್ಷಣ ಮಾದರಿಯಾಗಿ ಗುರುಕುಲದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ಹೆತ್ತವರು ತಮ್ಮ ಮಕ್ಕಳನ್ನು ಯಾವುದಾದರೂ ಗುರುವಿನ ಆಶ್ರಮದ ಬಳಿ ಬಿಟ್ಟರೆ ಒಂದು ಹಂತದ ಶಿಕ್ಷಣ ಮುಗಿಯುವವರೆಗೆ ಅಲ್ಲೇ ನಿಂತು ಶಿಕ್ಷಣ ಪೂರೈಸುತ್ತಿದ್ದರು. ಅಲ್ಲಿ ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲದೆ ಬದುಕಿನ ಪಾಠಗಳನ್ನು ಕಲಿಸುತ್ತಿದ್ದರು. ಜೀವನವನ್ನು ರೂಪಿಸುತ್ತಿದ್ದರು. ಬದುಕಿನ ಮೌಲ್ಯಗಳನ್ನು ಹೇಳಿಕೊಡಲಾಗುತ್ತಿತ್ತು. ಹಿರಿಯರಿಗೆ ಗೌರವ ನೀಡುವುದು ಹೇಗೆ, ಕೆಲಸವನ್ನು ಅಚ್ಚುಕಟ್ಟಾಗಿ ಕೆಲಸವನ್ನು ಮಾಡುವುದು ಹೇಗೆ ಮೊದಲಾದ ವಿಷಯಗಳನ್ನು ಅಲ್ಲಿ ಕಲಿಸುತ್ತಿದ್ದರು. ಎಲ್ಲ ಕೆಲಸಗಳನ್ನು ಕಲಿಸುವ ಈ ಆಶ್ರಮಗಳು ಇಂದಿನ ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಿವೆ. ಮಕ್ಕಳಿಗೆ ಇಂದು ಅಕ್ಷರಾಭ್ಯಾಸಕ್ಕಿಂತ ಹೆಚ್ಚು ಜಗತ್ತಿನ ಆಗುಹೋಗುಗಳ ಹಾಗೂ ಸಾಮಾನ್ಯ ಜ್ಞಾನದ ಪರಿಚಯವಿರಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿ ಅಥವಾ ಶಾಲೆಯಲ್ಲಿ ಇತರ ವಿಷಯಗಳನ್ನು ಬೋಧಿಸಬೇಕಾಗುತ್ತದೆ.
ಹಿರಿಯರೊಂದಿಗೆ ಸಂವಹನ ಅತ್ಯಗತ್ಯ
ಇಂದಿನ ಯುಗದಲ್ಲಿ ಪರಸ್ಪರ ಮಾತುಕತೆಗಳು ಕಡಿಮೆಯಾಗುತ್ತಿವೆ ಎಂಬ ಕೊರಗಿನ ಮಾತುಗಳು ಆಗಾಗ ಕೇಳಿಬರುತ್ತಿರುತ್ತದೆ. ನಾವು ಯಾರೊಂದಿಗೂ ಮಾತನಾಡದಿದ್ದರೆ ಇದರಿಂದ ಒಂಟಿತನವನ್ನು ಹೆಚ್ಚು ಮಾಡುತ್ತದೆ. ಇದು ಹೆಚ್ಚಾಗುತ್ತಾ ಹೋದಂತೆ ಜ್ಞಾನದ ಪರಿಧಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಇದನ್ನು ಕಡಿಮೆ ಮಾಡಲು ಹಿರಿಯರೊಂದಿಗೆ ಮಾತಕತೆಗಳು ನಿರಂತವಾಗಿರಬೇಕು. ಇದು ನಮ್ಮ ಜ್ಞಾನವನ್ನು ವಿಸ್ತರಿಸುತ್ತಾ ಹೋಗುತ್ತದೆ. ಅನೌಪಚಾರಿಕ ಶಿಕ್ಷಣಗಳು ಯಾವತ್ತೂ ಒಂದು ರಚನೆಯ ಒಳಗೆ ರೂಪುಗೊಳ್ಳುವುದಿಲ್ಲ. ಯಾವಾಗಲೂ ಏನಿದ್ದರೂ ರಚನೆಯನ್ನು ಬೇಧಿಸುವಂತವುಗಳಾಗಿರುತ್ತವೆ. ಒಟ್ಟಿಗೆ ಕುಳಿತು, ಆಟ, ಊಟ, ಶಿಕ್ಷಣಗಳನ್ನು ಮನನ ಮಾಡುವುದರಿಂದ ಒಬ್ಬ ವಿದ್ಯಾರ್ಥಿ ಕೇವಲ ಬುದ್ದಿವಂತನಾಗುವುದು ಮಾತ್ರವಲ್ಲ ಅವನಲ್ಲಿ ಸಮಾಜದಲ್ಲಿ ಬದುಕಲು ಬೇಕಾದ ಮೌಲ್ಯಗಳು ರೂಪುಗೊಳ್ಳುತ್ತವೆ. ಒಬ್ಬ ಉತ್ತಮ ವಿದ್ಯಾರ್ಥಿಯನ್ನು ರೂಪಿಸುವಲ್ಲಿ ಅನೌಪಚಾರಿಕ ಶಿಕ್ಷಣದ ಪಾತ್ರ ಮಹತ್ತರವಾಗಿದೆ.
ಸುಶ್ಮಿತಾ ಶೆಟ್ಟಿ ಸಿರಿಬಾಗಿಲು