ತಾಳ ಬ್ರಹ್ಮ ರಘುನಾಥ ಪ್ರಭು
Team Udayavani, Nov 16, 2018, 6:00 AM IST
ಸಂಗೀತದಲ್ಲಿ ತಾಳ ನುಡಿಸುವಿಕೆಯ ಪಾತ್ರಕ್ಕೆ ದೊಡ್ಡ ಸ್ಥಾನವಿದ್ದರೂ ತಾಳ ನುಡಿಸುವವರಿಗೆ ಹೆಚ್ಚಿನ ಮಹತ್ವ ನೀಡಿದಂತೆ ಕಾಣಿಸುವುದಿಲ್ಲ. ತಾಳವಿಲ್ಲದ ಸಂಗೀತ ಕಳಾಹೀನ. ತಾಳ ನುಡಿಸಲು ಸಾಧನೆ ಮತ್ತು ಕೌಶಲ ಅಗತ್ಯ. ತಾಳದ ಲಯತಪ್ಪಿದರೆ ಇಡೀ ಸಂಗೀತವೇ ಕೆಡುತ್ತದೆ. ತಾಳ ನುಡಿಸುವಿಕೆಯ (ಮಂಜಿರಾ) ಎಲ್ಲಾ ಆಯಾಮಗಳಲ್ಲಿ ಪ್ರೌಢಿಮೆ ಮೆರೆದ ಮಂಗಳೂರಿನ ಎಂ.ರಘುನಾಥ್ ಪ್ರಭು ಅವರನ್ನು ಇತ್ತೀಚೆಗೆ ಕೊಂಚಾಡಿಯ ವೆಂಕಟರಮಣ ದೇವಸ್ಥಾನದಲ್ಲಿ ತಾಳ ಬ್ರಹ್ಮ ಬಿರುದನ್ನಿತ್ತು ಸಮ್ಮಾನಿಸಲಾಯಿತು.
72ರ ಹರೆಯದ ರಘುನಾಥ ಪ್ರಭು ಮೂಲ್ಕಿಯವರು. ಬಾಲ್ಯದಲ್ಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಬಳಿಕ ತಾಳ ನುಡಿಸುವಿಕೆಯತ್ತ ವಾಲಿದರು. ಮಂಗಳೂರಿನ ವೀರ ವೆಂಕಟೇಶ ಭಜನಾ ಮಂಡಳಿ ಅವರ ಸಂಗೀತ ಕಲೆಯ ಪ್ರದರ್ಶನಕ್ಕೆ ವೇದಿಕೆಯಾಯಿತು. ನಿಡ್ಡೋಡಿ ವಿಠಲ ನಾಯಕ್ ಬಳಿ ಕಲಿತು ಪರಿಪೂರ್ಣ ತಾಳ ವಾದಕರಾದರು. ಎಲ್. ನರೇಂದ್ರ ನಾಯಕ್ ಇವರಿಗೆ ಸ್ಪೂರ್ತಿ ತುಂಬಿದರು.
ಪಂಡಿತ್ ಭೀಮಸೇನ ಜೋಶಿ, ಅನುರಾಧಾ ಪೊದ್ವಾಲ್, ದಿ| ಮಾಧವ ಗುಡಿ, ಸಂಜೀವ ಅಭ್ಯಂಕರ, ಶಂಕರ ಶಾನುಭೋಗ್, ಪುತ್ತೂರು ನರಸಿಂಹ ನಾಯಕ್, ಮಹಾಲಕ್ಷ್ಮೀ ಶೆಣೈ, ಉಪೇಂದ್ರ ಭಟ್, ಮಂಗೇಶ್ಕರ್ ಗೋವೆಕರ್, ಪಂ| ವೆಂಕಟೇಶ ಕುಮಾರ್, ಸಂತ ಭದ್ರಗಿರಿ ಅಚ್ಯುತದಾಸ,ಜಯತೀರ್ಥ ಮೇವುಂಡಿ ಮತ್ತಿತರ ಖ್ಯಾತನಾಮರಿಗೆ ಸಾಥ್ ನೀಡಿದ ಹಿರಿಮೆ ರಘುನಾಥ ಪ್ರಭು ಅವರದ್ದು. ನೂರಾರು ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ ಅನುಭವಿ ಅವರು.