ನಾರಾಯಣ ಪೂಜಾರಿಗೆ ಯಕ್ಷಬಳಗದ ಸಮ್ಮಾನ
Team Udayavani, Aug 23, 2019, 5:00 AM IST
ಯಕ್ಷಬಳಗ ಹೊಸಂಗಡಿ ಸಂಘದ ವತಿಯಿಂದ ಈ ಬಾರಿಯ ವಾರ್ಷಿಕ ಸಮ್ಮಾನ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಸಲ್ಲಲಿದೆ.
ನಾರಾಯಾಣ ಪೂಜಾರಿ ಬೆಜ್ಜಂಗಳ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದ ಸೇವೆಗೈಯುತ್ತಾ ಬಂದವರು. ಬಣ್ಣದ ವೇಷ ಹಾಗೂ ಹಾಸ್ಯಪಾತ್ರಗಳಲ್ಲಿ ಮಿಂಚುತ್ತ, ಯಕ್ಷಗಾನ ಸಂಯೋಜನೆಯನ್ನೂ ನಡೆಸುತ್ತಾ ಸದ್ದಿಲ್ಲದೆ ಯಕ್ಷಗಾನ ಕ್ಕಾಗಿ ದುಡಿಯುತ್ತಿದ್ದಾರೆ. ನಾರಾಯಣಗುರು ಪ್ರಸಾದಿತ ಯಕ್ಷಗಾನ ಕಲಾ ರಂಗವನ್ನು ವರ್ಕಾಡಿ ಸುಂಕದ ಕಟ್ಟೆ ಇದರ ಸ್ಥಾಪಕ ಅಧ್ಯಕ್ಷ ಅವರು. ಯಕ್ಷಗಾನ ಬಣ್ಣದ ವೇಷಕ್ಕೆ ಅನುಕೂಲವಾದಂತಹ ನೀಲಕಾಯ, ಉತ್ತಮ ಕಂಠ, ಪಾತ್ರೋಚಿತವಾಗಿ ಮಾತನಾಡುವ ಕೌಶಲ , ಹಿತಮಿತ ನಾಟ್ಯಗಾರಿಕೆ, ಬದುಕಲ್ಲಿ ಯಕ್ಷಗಾನ ಕಲೆಗಾಗಿ ತಾನೇನಾದರು ಕೊಡುಗೆ ನೀಡಬೇಕೆಂಬ ಅನನ್ಯ ತುಡಿತ ನಾರಾಯಣ ಪೂಜಾರಿಯವರನ್ನು ಇಷ್ಟು ಸುದೀರ್ಘಕಾಲ ಯಕ್ಷಗಾನರಂಗದಲ್ಲಿ ಬೆಳೆಯುವಂತೆ ಮಾಡಿದೆ.
ಎಳವೆಯಲ್ಲಿ ಹವ್ಯಾಸಿ ನಾಟಕ ತಂಡಗಳಲ್ಲಿ ಭಾಗವಹಿಸುತ್ತಾ ರಂಗಭೂಮಿಯಲ್ಲಿ ಬೇಡಿಕೆಯ ಕಲಾವಿದರಾಗಿದ್ದರು. ಮುಂದೊಂದು ದಿನ ದಿ| ಲೋಕಯ್ಯ ಶೆಟ್ಟಿ ವರ್ಕಾಡಿ ಅವರ ಪ್ರೇರಣೆಯಂತೆ ಯಕ್ಷಗಾನ ರಂಗದೆಡೆಗೆ ಒಲವು ಹರಿಸಿ ಹವ್ಯಾಸಿ ಯಕ್ಷಗಾನ ಕಲಾವಿದ ಕಳಿಯೂರು ತನಿಯಪ್ಪ ಭಂಡಾರಿಯವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತು ಮುಂದೆ ಹಿರಿಯ ವೇಷಧಾರಿ ಕೋಳ್ಯೂರು ನಾರಾಯಣ ಭಟ್ ಅವರು ತನ್ನ ಮನೆಯಲ್ಲೇ ಹೆಚ್ಚಿನ ನಾಟ್ಯಾಭ್ಯಾಸವನ್ನು ಕಲಿತರು. ಮಧುಕೈಟಭ, ಶುಂಭ, ರಾವಣ, ತಾರಕಾಸುರ, ಯಮ, ಭೀಮ, ವೀರಭದ್ರ, ಪಾತ್ರಗಳು ನಾರಾಯಣ ಪೂಜಾರಿಯವರಿಗೆ ಹೆಚ್ಚಿನ ಖ್ಯಾತಿಯನ್ನು ತಂದಿತ್ತು.
– ಯೋಗೀಶ ರಾವ್ ಚಿಗುರುಪಾದೆ