Artical: ಇದು ಗಂಟಿನ ವಿಷ್ಯ…

ಲಲಿತ ಪ್ರಬಂಧ

Team Udayavani, Aug 27, 2023, 1:16 PM IST

6-magazine

ಜೀವನದಲ್ಲಿ ಗಂಟು ಮಾಡಿಕೊಳ್ಳುವುದು ಎಲ್ಲರಿಗೂ ಗೊತ್ತಿದೆ. ಆದರೆ ಮುಂಜಾನೆಯಿಂದ ಸಂಜೆಯವರೆಗೂ ನಾನಾ ರೀತಿಯ ಗಂಟುಗಳ ಜೊತೆಗೆ ಗುದ್ದಾಡುವುದು ಇದೆ ನೋಡಿ, ಅದೇ ದೊಡ್ಡ ಪ್ರಾಬ್ಲಿಂ.

“ಇನ್ನೇನ್ರೀಪಾ…’ ಮುಂಜಾನೆ ಎದ್ದ ತಕ್ಷಣ ಕೂದಲು ಹಿಕ್ಕಿ ಗಂಟು ಬಿಡಿಸಿಕೊಳ್ಳುವ ಕೆಲಸ ಶುರು. ಅದೇನು ಸಣ್ಣ ಕೆಲಸವಾ ಹೇಳಿ. ಗಂಟು ಹಿಕ್ಕುವುದಕ್ಕೆ ಹತ್ತಾರು ವಿನ್ಯಾಸದ ಬಾಚಣಿಗೆಗಳು, ಹಚ್ಚಿಕೊಳ್ಳಲು ಸಿರಮ್‌ ಗಳು ಲಭ್ಯವಿದ್ದರೂ ಸುಲಭವಾಗಿ ಬಿಡುವುದಿಲ್ಲ. ಹಾಗೂ ಹೀಗೂ ಗುದ್ದಾಡಿ ಹಿಕ್ಕಿ, ಕೂದಲನ್ನು ಎತ್ತಿ ನೆತ್ತಿಯ ಮೇಲೆ ಗಂಟು ಬಿಗಿದು, ಉದುರಿರುವ ಕೂದಲುಗಳನ್ನು ಸಂಕಟಪಡುತ್ತಲೇ ಗಂಟು ಕಟ್ಟಿ ಡಸ್ಟ್‌ಬಿನ್‌ ಗೆ ಒಗೆದಾಗಲೇ ಬೆಳಗು ಸಂಪನ್ನ. ತಲೆಸ್ನಾನ ಮಾಡಿದಾಗಲೂ ಸಹ ಹೆಂಗಸರು ಉದ್ದನೆಯ ಕೂದಲಿಗೆ ತುದಿಗಂಟು ಹಾಕಿ ಪೂಜೆ ಮಾಡುವುದು ಹಳೆಯ ಕಾಲದಲ್ಲಿತ್ತು. ಈಗಿನವರದೆಲ್ಲ ಕತ್ತರಿಸಿದ ಮೊಂಡುಕೂದಲಾದ್ದರಿಂದ ಅದನ್ನೆಲ್ಲ ಯೋಚಿಸುವ ಹಾಗಿಲ್ಲ.

ಸಧ್ಯ… ರಾಜ ಮಹಾರಾಜರುಗಳ ಕಾಲದಲ್ಲಿದ್ದಂತೆ ಗಂಡುಮಕ್ಕಳಿಗೆ ಉದ್ದ ತಲೆಕೂದಲಿಲ್ಲವಲ್ಲ ಎಂದು ಸಮಾಧಾನ ಪಡಬೇಕು. ಆ ಗಡ್ಡ, ಮೀಸೆ, ತಲೆಗೂದಲನ್ನು ಟ್ರಿಮ್‌ ಇಟ್ಕೊಳ್ಳೋಕೇ ಹತ್ತಾರು ಸಲ ಬಡ್ಕೊಬೇಕು. ಅವರದೂ ಕೂದಲು ಗಂಟು ಬಿಡಿಸುವುದಿದ್ದಿದ್ದರೆ ಹೆಣ್ಣು ಮಕ್ಕಳ ಸ್ಥಿತಿ, ದೇವರೇ ಗತಿ.

ಶಾಲೆಗೆ ಹೋಗುವ ಹೆಣ್ಣುಮಕ್ಕಳಿದ್ದರೆ ಎರಡು ಜಡೆಯನ್ನು ರಿಬ್ಬನ್ನಿಂದ ಮೇಲಕ್ಕೆ ಕಟ್ಟಿ ಹೂಗಂಟು ಹಾಕುವ ಕೆಲಸ. ಬಂದು ಬಿಚ್ಚುವ ಹೊತ್ತಿಗೆ ಕಗ್ಗಂಟು ಮಾಡಿಕೊಂಡಿರುತ್ತಾರೆ. ಫ್ರಾಕ್‌, ಲಂಗ, ಪೈಜಾಮಾ ಎಲ್ಲದರ ಲಾಡಿಗಳನ್ನು ಗಂಟು ಕಟ್ಟೋದು, ಎಷ್ಟೋ ಸಲ ಅವು ಕಗ್ಗಂಟಾಗಿ ಬಿಡಿಸುವುದಕ್ಕೆ ಒದ್ದಾಡುವುದು ಸಾಮಾನ್ಯ.

ಜೊತೆಗೆ ಶೂ ಲೇಸ್‌ ಬೇರೆ. ಅದನ್ನೂ ಜಡೆಯೋ, ಚಾಪೆಯೋ ಹೆಣೆದ ಹಾಗೆ ಹೆಣೆದು ಗಂಟಾಕಬೇಕು. ಮನೆಯಲ್ಲೂ ಎಲ್ಲರ ಇಯರ್‌ ಪೋನ್‌ನುಗಳು, ಚಾರ್ಜರ್‌ಗಳು ಒಂದೇ ಕಡೆ ಇಟ್ಟು ನಿನ್ನೊಳಗೆ ನಾನು, ನನ್ನೊಳಗೆ ನೀನು ಎಂದು ಗಂಟು ಹಾಕಿಕೊಂಡು ಕೂತಿರುತ್ತವೆ. ಹೆಣ್ಣುಮಕ್ಕಳ ರವಿಕೆಗಳಿಗೂ ಸಹ ಹಿಂಭಾಗದಲ್ಲಿ ಲಾಡಿಗಳನ್ನು ಗಂಟು ಕಟ್ಟಿಕೊಳ್ಳುವಂತೆ ಹೊಲಿಯುತ್ತಿರುವುದು ಇತ್ತೀಚೆಗೆ ತುಂಬ ಫ್ಯಾಷನ್‌. ಹಳೆಯ ಕಾಲದಲ್ಲಿ ಹೆಣ್ಣುಮಕ್ಕಳು ಸೀರೆಯನ್ನೂ ಗಂಟುಕಟ್ಟಿಯೇ ಉಟ್ಟುಕೊಳ್ಳುತ್ತಿದ್ದರಂತೆ, ಜೊತೆಗೆ ಸೊಂಟದಲ್ಲಿ ಬಾಳೇಕಾಯಿ ಗಂಟು ಅಂತಾ ಕಟ್ಟಿಕೊಳ್ಳುತ್ತಿದ್ದರಂತೆ ಎಂದು ಅಮ್ಮ ಹೇಳುತ್ತಿದ್ದ ನೆನಪು.

ಇನ್ನು ಮನೆಯಲ್ಲಿ ಗಂಡ, ಮಕ್ಕಳು, ಅತ್ತೆ, ಮಾವ, ಹೀಗೆ ಯಾವಾಗ ಯಾರ ಹುಬ್ಬು ಗಂಟಿಕ್ಕುತ್ತದೆಯೋ, ಯಾರ ಮುಖ ಗಂಟಿಕ್ಕುತ್ತದೆಯೋ ಯಾರಿಗೂ ಗೊತ್ತಾಗುವುದಿಲ್ಲ. ಉಳಿದವರ ಗಂಟು ಮಾರಿಗಳನ್ನು ಹೇಗಾದರೂ ರಿಪೇರಿ ಮಾಡಬಹುದೇನೋ, ಪತಿ ದೇವರ ಗಂಟುಮಾರಿ ಸರಿಮಾಡಲು ಈ ಜನ್ಮದಲಿ ಸಾಧ್ಯವಿಲ್ಲ ಬಿಡಿ.

ಅದೇನು ಮುಖವನ್ನು ಬೇಕೂ ಅಂತಾ ಗಂಟು ಹಾಕಿರುತ್ತಾರೋ, ಸಡಿಲ ಬಿಟ್ಟರೆ ಹೆಂಡತಿ ಎಲ್ಲಿ ತಲೆಯ ಮೇಲೆ ಹತ್ತಿ ಕುಳಿತುಬಿಡುತ್ತಾಳ್ಳೋ ಎನ್ನುವ ಭಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಕಲಿತ ಬುದ್ದಿಯೆಲ್ಲ ಖರ್ಚಾಗದಿದ್ದರೆ ಕೇಳಿ. ಇನ್ನು ಅಡುಗೆಗೆ ಅಂತಾ ಹೋದರೆ ಉಪ್ಪಿಟ್ಟೋ, ಶಿರಾನೋ ಮಾಡುವಾಗ ಕೈಯ್ನಾಡಿಸುವುದನ್ನು ಮರೆತರೆ ಮುಗಿಯಿತು, ಗೋಡಂಬಿ ದ್ರಾಕ್ಷಿಯ ಬದಲಾಗಿ ಗಂಟುಗಳೇ ಹೆಚ್ಚು ಕಾಣುತ್ತಿರುತ್ತವೆ. ಗಂಟಿಲ್ಲದಂತೆ ಮುದ್ದೆ ಮಾಡುವುದು, ಹಿಟ್ಟು ಕಲೆಸುವುದೂ ಸಹ ಸುಲಭವಾಗಿ ಒಲಿಯದ ಕಲೆಯೆಂದೇ ಹೇಳಬಹುದು.

ಮದುವೆಗಳು ಸ್ವರ್ಗದಲ್ಲೇ ನಡೆಯುತ್ತವೆ ಎಂದು ಬಲ್ಲವರು ಹೇಳಿದರೂ, ಆ ಬ್ರಹ್ಮಗಂಟು ರಿಜಿಸ್ಟರ್‌ ಆಗುವುದು ಹೆಣ್ಣಿನ ಕೊರಳಿಗೆ ತಾಳಿಸರದ ಮೂರುಗಂಟು ಬಿದ್ದ ಮೇಲೆಯೇ. ಆ ತಾಳಿಸರದಲ್ಲೂ ಮತ್ತೆ ಐದು ಗಂಟು ಹಾಕಿರುತ್ತಾರೆ. ನಂತರವೂ ಸಪ್ತಪದಿ ಸುತ್ತುವಾಗ ಮತ್ತೆ ವಧು ವರರಿಬ್ಬರ ಉತ್ತರೀಯಕ್ಕೆ ಗಂಟು ಹಾಕಿರುತ್ತಾರೆ. ನಂತರ ಜೀವನ ಪೂರ್ತಿ ಪರಸ್ಪರ ಒಬ್ಬರನ್ನೊಬ್ಬರು “ಶನಿ ಗಂಟು ಬಿದ್ದಂತೆ ಗಂಟು ಬಿದ್ದಿದ್ದೀಯಾ ನೀನು’ ಎಂದು ಶಪಿಸಿ­ಕೊಳ್ಳುತ್ತಲೇ ಸಾಗುವುದೇ ಜೀವನ. ಹರಿಶ್ಚಂದ್ರನಿಗೆ ನಕ್ಷತ್ರಿಕ ಗಂಟುಬಿದ್ದಂತೆ ಬದುಕು.

ಕತ್ತೆ ಇರುವುದೇ ಬಟ್ಟೆಯ ಗಂಟು ಹೊರುವುದಕ್ಕೆ ಎನ್ನುವ ಕಾಲವೂ ಇತ್ತು. ಹಳ್ಳಿಯ ಜನ ಸಂತೆಗೆ ಹೋದರೆಂದರೆ ಹೊರಲಾರದಷ್ಟು ಸಾಮಾನುಗಳನ್ನು ಚೀಲಗಳಲ್ಲಿ ತುಂಬಿ ಗಂಟು ಕಟ್ಟಿ, ಹೆಣ್ಣು ಮಕ್ಕಳಾದರೆ ತಲೆಯ ಮೇಲೊಂದು ಕಂಕುಳದಲ್ಲೊಂದು ಹೊತ್ತು ನಡೆಯುತ್ತಾರೆ. ಗಂಡಸರಾದರೆ ಹೆಗಲಲ್ಲೊಂದು, ಬಗಲಲ್ಲೊಂದು. ಈಗಲೂ ಬುತ್ತಿಗಂಟು ಕಟ್ಟಿಕೊಂಡು ಸೊಪ್ಪಿನ ಗಂಟು, ಹೂವಿನ ಗಂಟುಗಳನ್ನು ಹೊತ್ತು ಕೇರಿ ಕೇರಿ ತಿರುಗಿ ಮಾರಿ ಹೊಟ್ಟೆ ಹೊರೆಯುವವರಿದ್ದಾರೆ. ಮನೆಮನೆಗೆ ಬಟ್ಟೆಗಂಟು ಹೊತ್ತು ತಂದು ಮಾರುವವರು ಇತ್ತೀಚೆಗೆ ಕಡಿಮೆಯಾಗಿದ್ದಾರೆ.

ಸಣ್ಣಮಟ್ಟಿಗಿನ ಇಡುಗಂಟು ಕೂಡಿಡುವುದು ಪ್ರತಿಯೊಬ್ಬರ ಕನಸು. ಎಷ್ಟೋ ಜನರ ಕನಸುಗಳು ಕನ್ನಡಿಯೊಳಗಿನ ಗಂಟಾಗುವುದೇ ಹೆಚ್ಚು. ರಾಜಕಾರಣಿಗಳಂತೂ ಮೂರು ತಲೆಮಾರಿಗಾಗುವಷ್ಟು ಆಸ್ತಿಯನ್ನು ವಾಮಮಾರ್ಗದಲ್ಲಿ ಗಂಟಿಕ್ಕಿರುತ್ತಾರಾದ್ದರಿಂದ ಒಂದು ರೀತಿಯಲ್ಲಿ ಗಂಟುಕಳ್ಳರು ಎನ್ನಬಹುದು. ಕೊರೋನಾ ಸಮಯದಲ್ಲಿ ನಗರಗಳಿಂದ ಗಂಟು-ಮೂಟೆ ಕಟ್ಟಿಕೊಂಡು ತಮ್ಮ ಮೂಲ ನೆಲೆಗೆ ಹೊರಟವರು ನೆನಪಿರಬಹುದು.

ಕೆಲವರು “ಅಲ್ಲೇನು ಗಂಟಿಕ್ಕಿದೀಯಾ’, “ನಿನ್ನ ಗಂಟು ಏನು ತಿಂದಿದೀನಿ ನಾನು’ ಎಂದು ಮುಖ ಗಂಟಿಕ್ಕಿ, ಏನು ಗಂಟುಕೊಟ್ಟು ಬಿಟ್ಟಿದ್ದಾರೇನೋ ಎನ್ನುವಂತೆ ದಬಾಯಿಸುತ್ತಿರುತ್ತಾರೆ. ಆಗಿನ ಕಾಲದಲ್ಲಿ ಮೊಣಕಾಲುಗಂಟು ನೋವುಗಳು ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗ ನಲ್ವತ್ತು ವರ್ಷಕ್ಕೇ ಗಂಟುನೋವುಗಳು ಗಂಟುಬಿದ್ದು, ನಾಲ್ಕು ಹೆಜ್ಜೆ ನಡೆಯಲು ಕಷ್ಟಪಡುವವರು ತುಂಬ ಇದ್ದಾರೆ. ಜಾನುವಾರುಗಳಿಗೆ ಚರ್ಮಗಂಟು ರೋಗ ಮಾರಕವಾದರೆ ಮನುಷ್ಯರಿಗೆ ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಗಂಟುಗಳ ಪೀಡೆ. ಮನುಷ್ಯ ಮಾಡಿದ ಪಾಪದ ಗಂಟು, ಪುಣ್ಯದ ಗಂಟು ದೇವರು ಲೆಕ್ಕ ಇಡುತ್ತಾನೆಂದು ಹೇಳುತ್ತಾರೆ.

ಹೂವಿನ ಮಾಲೆ ಅಥವಾ ಹಾರವಾಗುವು­ದೆಂದರೆ ಅದು ಗಂಟಿನ ನಂಟೇ. ಪೋಣಿಸುವುದಿದ್ದರೆ ದಾರಕ್ಕೆ ಎರಡೂ ಕಡೆ ತುದಿಗಂಟು, ಮಾಲೆ ಮಾಡುವುದಿದ್ದರೆ ಹೂವಿನ ಕುತ್ತಿಗೆಗೆ ಕೋಮಲಗಂಟು ಹಾಕಲೇಬೇಕು. ಉಲ್ಲನ್‌ ಅಥವಾ ದಾರದಿಂದ ಗಂಟಿನ ಹೆಣಿಕೆ ಹಾಕುವುದು ಜೊತೆಗೆ ಗಂಟು ರಂಗೋಲಿ ಕಲೆ ಹೆಣ್ಣುಮಕ್ಕಳಿಗೆ ತುಂಬ ಪ್ರಿಯವಾದದ್ದು. ಕೊಡದ ಕುತ್ತಿಗೆಗೆ ಕುಣಿಕೆ ಗಂಟು ಹಾಕದಿದ್ದರೆ ನೀರು ಸೇದಲು ಸಾಧ್ಯವೇ? ಆದರೆ ನೇಣಿನ ಕುಣಿಕೆಯ ಗಂಟು ತರುವ ನೋವು ಅಪಾರ.

ಕೆಲವು ಗಂಟುಗಳು ಗಂಟಾಗಿದ್ದರೆ ಮಾತ್ರ ಸುಂದರ ಅನುಬಂಧ, ಕೆಲವು ಗಂಟುಗಳು ಬಿಡುಗಡೆಯಾದಾಗಲೇ ಚಂದ. ಗಂಟಿನ ನಂಟಿನ ಅಂಟು ಮಾತ್ರ ಮನುಷ್ಯನ ಜೀವನದುದ್ದಕ್ಕೂ ವಿವಿಧ ರೂಪಗಳಲ್ಲಿ ಜೊತೆಯಾಗಿ ಸಾಗಿಬರುವುದುಂಟು.

-ನಳಿನಿ ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

1-rrewrwe

Pakistan ತಾಕತ್ತೇನೆಂದು ಖುದ್ದು ಪರೀಕ್ಷಿಸಿ ಬಂದಿರುವೆ:ಮೋದಿ!

1-ewewqewq

Israel ವನಿತಾ ಸೈನಿಕರಿಗೆ ಹಮಾಸ್‌ನಿಂದ ಚಿತ್ರಹಿಂಸೆ: ಇವರೆಲ್ಲರೂ ಗರ್ಭಿಣಿಯಾಗಬಲ್ಲರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Baratang‌ Island: ಬಾರಾತಂಗ್‌ ಎಂಬ ಬೆರಗು

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

11

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

Pen drive case: ತಾರಕಕ್ಕೇರಿದ ಕಾಂಗ್ರೆಸ್‌-ಜೆಡಿಎಸ್‌ ಗುದ್ದಾಟ

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

40

Prajwal Revanna: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗೆ  ಕೇಂದ್ರ ಪ್ರಕ್ರಿಯೆ ಆರಂಭ; ಜೋಷಿ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

Horoscope: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.