ಹಾರುತ ದೂರ ದೂರ…
Team Udayavani, Jan 14, 2020, 5:00 AM IST
ನನಗಂತೂ ತುಂಬಾ ಸಂತೋಷವಾಗುತ್ತಿದೆ. ಕೊನೆಗೂ ನಮ್ಮ ಪ್ರೀತಿ ನಿಜವಾಯಿತು. ಹಲವು ವರ್ಷಗಳ ನನ್ನ ಪ್ರೇಮದ ತಪಸ್ಸಿಗೆ ಸಿಕ್ಕ ಅದ್ಭುತ ಕೊಡುಗೆ ಎಂದರೆ ಅದು ನೀನೇ. ನಿನ್ನ ಪ್ರೀತಿ, ನಿನ್ನ ಮನಸ್ಸನ್ನು ಗೆಲ್ಲಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ . ಅದೆಷ್ಟೋ ಕನಸುಗಳು ನನ್ನ ಮನದಲ್ಲಿ ಮನೆ ಮಾಡಿವೆ ಎಂದರೆ ನನಗೇ ನಂಬಲಾಗುತ್ತಿಲ್ಲ. ನಿನ್ನನ್ನು ಕವಿತೆಗಳಿಂದ ಅಲಂಕರಿಸಿ, ಉಪಮಾನ ಉಪಮೇಯ ಗಳೊಂದಿಗೆ ಆರಾಧನೆ ಮಾಡಿದರೆ ಸಾಲದು. ಕೊನೆಗೂ ನನ್ನ ಪ್ರೀತಿಗೆ ಜಯ ಲಭಿಸಿದೆ. ಅದೇ ನೆಪದಲ್ಲಿ ನನ್ನೊಳಗೆ ಹೊಸತನ, ಹೊಸ ಕನಸುಗಳು ಚಿಗುರೊಡೆಯುತ್ತಿವೆ. ಕಣ್ಣ ಮುಂದಿರುವ ಭವಿಷ್ಯ, ಬಣ್ಣ ಬಣ್ಣದಿಂದ ಸುಂದರವಾಗಿ ಗೋಚರಿಸುತ್ತಿದೆ . ನಿನ್ನೊಂದಿಗೆ ಕಳೆಯುವ ಕ್ಷಣಗಳೆಲ್ಲ ಆಕಾಶದಲ್ಲಿ ಹಕ್ಕಿಯ ಹಾಗೆ ಹಾರಾಡುತ್ತಿರುವಂತೆ ಭಾಸವಾಗುತ್ತಿವೆ.
ಪ್ರೀತಿಯೆಂಬ ಯುದ್ಧವನ್ನೇನೋ ಗೆದ್ದಾಯಿತು. ಆದರೆ, ಬದುಕೆಂಬ ಯುದ್ಧ ನಮ್ಮ ಕಣ್ಣಮುಂದಿದೆ. ಕನಸುಗಳನ್ನು ನನಸಾಗಿಸಲು ನಾವಿಬ್ಬರೂ ದೃಢವಾದ ಮನಸ್ಸು, ಅಚಲ ಪ್ರೀತಿ, ನಂಬಿಕೆ ವಿಶ್ವಾಸಗಳನ್ನು ಬದುಕಿನ ಕೊನೆಯವರೆಗೂ ಉಳಿಸಿಕೊಳ್ಳುವುದು ಮುಖ್ಯ. ಭವಿಷ್ಯದ ಭದ್ರ ಬುನಾದಿ ನಿರ್ಮಿಸಿಕೊಳ್ಳುವಲ್ಲಿ ನಮ್ಮ ಓದು, ಉದ್ಯೋಗ ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಗಮನ ಇವುಗಳ ಕಡೆಗೆ ಸಾಗಲಿ. ಹಾಗೆಂದ ಮಾತ್ರಕ್ಕೆ ಪ್ರೀತಿಗೆ ಕೊರತೆಯಾಯಿತು ಎಂಬ ಪ್ರಶ್ನೆಯೇ ಹುಟ್ಟುವುದಿಲ್ಲ. ನಮ್ಮ ಪ್ರೀತಿ ಎಂದಿಗೂ ಹಸಿರು. ಕಲ್ಪನೆಗೂ ಸಿಲುಕದ ಸುಂದರ ದಿನಗಳು ಇರುವಾಗ ನಮಗೆ ಯಾವುದರ ಭಯವೂ ಇಲ್ಲ ಎಂಬ ನಂಬಿಕೆ ಅಚಲವಾಗಿರಲಿ. ಎಲ್ಲರೂ ಹರಸಿ ಹಾರೈಸಿ ನಮ್ಮ ಸುಂದರ ಬದುಕಿಗೆ ನಾಂದಿ ಹಾಡುವಂಥ ವಿಶ್ವಾಸವನ್ನು ಗಳಿಸೋಣ. ಆನಂತರ, ಪ್ರೇಮಪಕ್ಷಿ ಗಳಾಗಿ ಹಾರುತ ದೂರ ದೂರ, ಬದುಕೆಂಬ ಕಡಲನ್ನು ದಾಟುವ.
ವೆಂಕಟೇಶ ಚಾಗಿ