ಮನಗೆದ್ದ ಬಾಂದ್ನಿ
Team Udayavani, Mar 31, 2017, 3:50 AM IST
ಮಗು ವಿದ್ಯಾರ್ಥಿಯಾಗಿ ಕಲಿಯುವ ಶಾಲೆಗಳಲ್ಲಿ ಪ್ರತಿಭಾ ವಿಕಸನಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳು ನಿರಂತರ ನಡೆಯುತ್ತಿದ್ದರೆ ಆ ಮಗುವಿನ ಬೌದ್ಧಿಕ ವಿಕಾಸ ಸಕಾಲದಲ್ಲಿ ಆಗುತ್ತದೆ ಹಾಗೂ ಅದು ಜೀವಿಸುವ ಕಲೆಯನ್ನು ಮಗುವಿಗೆ ಹೇಳಿಕೊಡುತ್ತದೆ. ಇದನ್ನರಿತಿರುವ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಒಂದು ವಾರ ಕಾಲ ವಿಕಸನ ಶಿಬಿರ ನಡೆದು ಮಕ್ಕಳಿಗೆ ಹತ್ತಾರು ವಿಷಯಗಳ ಬಗ್ಗೆ ನೈಜ ಅನುಭವವಾಯಿತು.
ವಿಕಸನ ಶಿಬಿರದಲ್ಲಿ ನಡೆದ ಬಾಂದನಿ ಕಲಾಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲದ ಕಲಾವಿದೆ ಪವನ್ ಬಿ. ಆಚಾರ್ ಭಾಗವಹಿಸಿ ವಿಶೇಷವಾಗಿ ಬಾಂದನಿ ಕಲೆಯ ಬಗ್ಗೆ ಕೌಶಲಭರಿತವಾಗಿ ವಿವರಿಸಿದರು. ಹಿಂದಿನ ಕಾಲದಲ್ಲಿ ಬಣ್ಣದ ಬಟ್ಟೆಗಳನ್ನು ಬಾಂದನಿ ಕಲೆಯ ಮುಖಾಂತರವೇ ತಯಾರಿಸುತ್ತಿದ್ದರು. ಬಟ್ಟೆಯನ್ನು ಶುದ್ಧಿಗೊಳಿಸಿ ನಮಗೆ ಬೇಕಾದ ಕಡೆ ದಾರದಿಂದ ಗಂಟುಗಳನ್ನು ಬಿಗಿಯಾಗಿ ಕಟ್ಟಬೇಕು. ಹೀಗೆ ಕಟ್ಟುವಾಗ ಗಂಟಿನೊಳಗೆ ಕಲ್ಲು ಅಥವಾ ಇನ್ನಿತರ ವಸ್ತುಗಳನ್ನು ಸುತ್ತಿ ಕಟ್ಟಬಹುದು. ಅನಂತರ ಡೈ ಇಂಕಿನೊಳಗೆ ಬಟ್ಟೆಯನ್ನು ಮುಳುಗಿಸಿ ಬೇಯಿಸ ಬೇಕು. ಸ್ವಲ್ಪ ಹೊತ್ತಿನ ಅನಂತರ ಬಟ್ಟೆಯನ್ನು ತೆಗೆದು ಒಣಗಿಸಿ ಬಿಡಿಸಿದಾಗ ಚಿತ್ರ-ವಿಚಿತ್ರ ಚಿತ್ತಾರ ಬಟ್ಟೆಯಲ್ಲಿ ಮೂಡುತ್ತವೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ತಾವೂ ಬಟ್ಟೆಯಲ್ಲಿ ಬಾಂದನಿ ಕಲಾಚಿತ್ತಾರ ಮೂಡಿಸಿ ಮುದಗೊಂಡರು.
ಶಾಲಾ ಸಿಬಂದಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಪಾಠಗಳನ್ನು ಕೇಳಿ ಬೇಸರಗೊಂಡಿದ್ದ ವಿದ್ಯಾರ್ಥಿ ಮನಸ್ಸುಗಳಿಗೆ ಪ್ರಾತ್ಯಕ್ಷಿಕೆ ಯಿಂದ ಉಲ್ಲಾಸದ ಸಿಂಚನವಾಯಿತು. ಬೌದ್ಧಿಕ ವಿಕಸನಕ್ಕೆ ದಾರಿಯಾಯಿತು.
ಉಪಾಧ್ಯಾಯ ಮೂಡುಬೆಳ್ಳೆ